ಎಲ್ಲೆಲ್ಲೂ ನೀರು.. ವರುಣನ ರಣಾರ್ಭಟ.. ಇದು ರಸ್ತೆಯೋ ಅಥವಾ ನದಿಯೋ ಎಂಬ ಗೊಂದಲ.. ದೇವರ ನಾಡು ಕೇರಳದ ಸದ್ಯದ ಘನಘೋರ ಪರಿಸ್ಥಿತಿ ಇದು.ಸಾಕಪ್ಪಾ ಸಾಕು ಈ ಮಳೆ ಅಂತ ಕೇರಳಿಗರು ವರುಣ ದೇವನಿಗೆ ಹಿಡಿಶಾಪ ಹಾಕ್ತಿದ್ದಾರೆ. ವರುಣ ದೇವ ಸೃಷ್ಟಿಸಿರೋ ಅವಾಂತರಗಳು ಅಷ್ಟಿಷ್ಟಲ್ಲ..
ದೇವರನಾಡು ಕೇರಳದಲ್ಲಿ ರಣ ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವೈನಾಡಿನಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತದಿಂದ ಪರಿಸ್ಥಿತಿ ಅಯೋಮಾಯವಾಗಿದೆ. ಭೂಕುಸಿತದಿಂದಾಗಿ ಇಡೀ ಊರೇ ನದಿಯಂತಾಗಿದೆ. 40ಕ್ಕೂ ಹೆಚ್ಚು ಮಂದಿ ಈ ವರೆಗೂ ಸಾವನ್ನಪ್ಪಿದ್ದು, ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಹೇಳಲಾಗುತ್ತಿದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ.
ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ . ಸಂತ್ರಸ್ಥರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಅವಘಡದಲ್ಲಿ ಮಕ್ಕಳೂ ಸೇರಿದಂತೆ ನೂರಾರು ಜನರು ಕಣ್ಮರೆಯಾಗಿದ್ದಾರೆ. ನಸುಕಿನ ಜಾವದಲ್ಲಿ 2 ಬೆಟ್ಟಗಳು ಕುಸಿದಿದ್ದು, ಅವಶೇಷಗಳಡಿಯಲ್ಲಿ ಗ್ರಾಮದ ಜನರು ಸಿಲುಕಿದ್ದಾರೆ. ಮಕ್ಕಳು ಸೇರಿ ಈ ವರೆಗೂ 40 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ದೃಶ್ಯಗಳು ಕರುಳು ಹಿಂಡುವಂತಿದೆ. ಜಲಸ್ಪೋಟದಿಂದಾಗಿ ಗುಡ್ಡದಿಂದ ನೀರು ಭಾರಿ ರಭಸವಾಗಿ ಹರಿದಿರುವ ಕಾರಣ ಮನೆಗಳು ಸೇರಿದಂತೆ ಹಲವಾರು ಮಂದಿ ಕೊಚ್ಚಿಹೋಗಿದ್ದಾರೆ. ಅಲ್ಲದೆ ಈ ಪ್ರದೇಶಗಳು ಸಂಪೂರ್ಣವಾಗಿ ಸಂಪರ್ಕಗಳನ್ನ ಕಳೆದುಕೊಂಡಿದ್ದು ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ವಾಯುಪಡೆಯ ಎರಡು ಹೆಲಿಕಾಪ್ಟರ್ ಗಳನ್ನ ಪೀಡಿತ ಪ್ರದೇಶಕ್ಕೆ ಕಾರ್ಯಾಚರಣೆಗಾಗಿ ಕರೆಸಿಕೊಂಡಿದ್ದು ಹೆಲಿಕಾಫ್ಟರ್ಗಳು ಲ್ಯಾಂಡ್ ಆಗಲು ಸ್ಥಳವೇ ಇಲ್ಲದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ.ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಭೂಕುಸಿತ ವಾಗಿದ್ದು, ನೂರಾರು ಕುಟುಂಬಗಳು ಮಣ್ಣಿನಲ್ಲಿ ಕಣ್ಮರೆಯಾಗಿದೆ. ಇಷ್ಟಾದರೂ ಕರುಣೆ ತೋರದ ವರುಣದೇವ ಬಿಟ್ಟು ಬಿಡದೆ ಸುರಿಯುತ್ತಿದ್ದಾನೆ.
ನೆರವಿಗೆ ಸಿದ್ಧ ಎಂದ ಪ್ರಧಾನಿ ನರೆಂದ್ರ ಮೋದಿ
ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಪಿಎಮ್ ನರೇಂದ್ರ. ಅಲ್ಲದೆ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಗಾಯಗೊಂಡವರು ಬೇಗ ಗುಣಮುಖರಾಗಲಿ. ಭೂಕುಸಿತದ ಕುರಿತು ಪಿಣರಾಯಿ ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ ಎಲ್ಲಾ ನೆರವನ್ನು ನೀಡಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ.