ದ್ವಿಪವಾದ ನಾಪೋಕ್ಲು ಪಟ್ಟಣ
ಹಲವೆಡೆ ಹಾನಿ ಜನಜೀವನ ಅಸ್ತವ್ಯಸ್ತ
ಪ್ರತಿನಿಧಿ ವರದಿ ನಾಪೋಕ್ಲು
ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ವಿಭಾಗದ ಕಾವೇರಿ ನದಿ ಸೇರಿದಂತೆ ಉಪನದಿಗಳು ಮೈದುಂಬಿ ಹರಿಯುತ್ತಿದೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡರೆ, ಪ್ರವಾಹದಿಂದ ಹಲವು ಮನೆಗಳು ಜಲಾವೃತಗೊಂಡು ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಮೂರು ದಿನಗಳಿಂದ ನಾಪೋಕ್ಲು ವಿಭಾಗದಲ್ಲಿ ಕಾವೇರಿ ನದಿ ಮೈದುಂಬಿ ಹರಿದು ನಾಪೋಕ್ಲು ಬೆಟ್ಟಗೇರಿ ಮಡಿಕೇರಿ ತೆರಳುವ ಮುಖ್ಯ ರಸ್ತೆಯ ಕೊಟ್ಟಮುಡಿ ಬಳಿಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪಟ್ಟಣಕ್ಕೆ ಸಂಚರಿಸುವ ಎಲ್ಲ ರಸ್ತೆಗಳು ಜಲಾವೃತಗೊಂಡು ಪಟ್ಟಣವು ದ್ವೀಪವಾಗಿ ಮಾರ್ಪಟ್ಟಿದೆ.
ಪಟ್ಟಣದ ಮೂರ್ನಾಡು ರಸ್ತೆಯಲ್ಲೂ ಎರಡು ದಿನಗಳ ಹಿಂದೆಯೇ ಪ್ರವಾಹ ಆವರಿಸಿ ಸಂಚಾರ ಕಡಿತಕೊಂಡಿದೆ. ನಾಪೋಕ್ಲು ಗ್ರಾಪಂಗೆ ಒಳಪಟ್ಟ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಈ ಭಾಗದ ನದಿ ದಡದಲ್ಲಿರುವ ಅಲವು ಮನೆಗಳಿಗೆ ಪ್ರವಾಹ ಅವರಿಸಿದ್ದು, ವಿವಿಧ ಸಂಘಟನೆಗಳ ಸದಸ್ಯರ ನೆರವಿನಿಂದ ಇಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಪ್ರವಾಹದಿಂದ ಈ ಗ್ರಾಮದ 300 ರಿಂದ 400ಕ್ಕೂ ಅಧಿಕ ಕುಟುಂಬಗಳು ರಸ್ತೆ ಹಾಗೂ ಗ್ರಾಮದ ತಗ್ಗುಪ್ರದೇಶಕ್ಕೆ ಪ್ರವಾಹ ಬಂದು ಸಂಕಷ್ಟ ಅನುಭವಿಸುವಂತಾಗಿದೆ.
ಪಟ್ಟಣದ ಕೊಟ್ಟಮುಡಿ ಬೆಟ್ಟಗೇರಿ, ಮೂರ್ನಾಡು, ಕೈಕಾಡು ರಸ್ತೆಯಲ್ಲಿರುವ ಪ್ರವಾಹದ ನೀರು ವೀಕ್ಷಣೆಗೆ ಜನರು ಅಧಿಕ ಸಂಖ್ಯೆಯಲ್ಲಿ ತೆರಳುತ್ತಿರುವ ದೃಶ್ಯ ಕಂಡು ಬಂತು. ಪ್ರವಾಹದ ನೀರಿನಲ್ಲಿ ದುಸ್ಸಹಾಸಕ್ಕೆ ಇಳಿಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿ ಗೇಟ್ ಅಳವಡಿಸಿ ಕ್ರಮಕೈಗೊಂಡಿದ್ದಾರೆ.
ಪ್ರವಾಹದಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡು ನಾಲ್ಕು ನಾಡುವ್ಯಾಪ್ತಿಯ ಜನರಿಗೆ ಮಡಿಕೇರಿ, ವಿರಾಜಪೇಟೆ ಸೇರಿದಂತೆ ಇನ್ನಿತರ ಕಡೆಗಳಿಗೆ ತೆರಳಲು ಅಸಾಧ್ಯವಾಗುತ್ತಿದೆ. ಪ್ರತಿ ವರ್ಷ ರಸ್ತೆ ಮೇಲೆ ಪ್ರವಾಹ ಬರುತ್ತಿದ್ದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಬೆಟ್ಟಗೇರಿ ರಸ್ತೆ ಜಲಾವೃತ್ತ ಕೊಂಡರೆ ತುರ್ತು ಸಂದರ್ಭದಲ್ಲಿ ತೆರಳಲು ಬಹಳ ಸಮಸ್ಯೆಯಾಗಿತ್ತಿದೆ. ಜಲಾವೃತಗೊಳ್ಳುತ್ತಿರುವ ಪ್ರಮುಖರಸ್ತೆಗಳನ್ನು ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿಗಳು ಗಮನಹರಿಸಿ ತಗ್ಗು ರಸ್ತೆಯನ್ನು ಎತ್ತರಪಡೆಸಿ ಜಲಾವೃತ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದು ಕಾವೇರಿ ನದಿ ಪ್ರವಾಹದಲ್ಲಿ ಇಳಿಕೆಯಾಗುವ ಸಾಧ್ಯತೆ ಕಂಡುಬಂದಿದೆ.