ಕಾಪಿರೈಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ಯಶವಂತಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ನಟ ರಕ್ಷಿತ್ ಶೆಟ್ಟಿಯನ್ನು ಪೊಲೀಸರು 1 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಪರಮ್ವಾ ಸ್ಟೂಡಿಯೋಸ್ ಅಡಿಯಲ್ಲಿ ಮೂಡಿಬಂದಿದ್ದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಹಾಡುಗಳನ್ನ ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಎಂಆರ್ ಟಿ ಸಂಸ್ಥೆಯು ರಕ್ಷಿತ್ ಶೆಟ್ಟಿ ಮತ್ತು ಪರಮ್ವಾ ಸ್ಟೂಡಿಯೋಸ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ಚಿತ್ರದಲ್ಲಿ ‘ನ್ಯಾಯ ಎಲ್ಲಿದೆ’ ಎಂಬ ಹಾಡು ಮತ್ತು ‘ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ’ ಹಾಡನ್ನು ಅನಧಿಕೃತವಾಗಿ ಬಳಸಿದ್ದಾರೆ ಎಂದು ದೂರಿನಲ್ಲಿ ಎಂಆರ್ ಟಿ ಸಂಸ್ಥೆ ಹೇಳಿದೆ. ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದರು.
ದೂರಿನ ಬೆನ್ನಲ್ಲೇ ಇಂದು ವಿಚಾರಣೆಗೆ ಹಾಜರಾಗಿರುವ ರಕ್ಷಿತ್ ಶೆಟ್ಟಿ ಪೊಲೀಸರ ವಿಚಾರಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಿನಿಮಾ ರಿಲೀಸ್ ಗೂ ಮುನ್ನ ಎಂಆರ್”ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಹಾಡು ಬಳಕೆ ಮಾಡುವ ಮಾತುಕತೆ ನಡೆಸಿದ್ದವು. ಆದರೆ, ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂಆರ್’ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರುಮಾತುಕತೆಗೆ ಅವರು ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳ ತೋರಿಸಿದ ರಕ್ಷಿತ್ ಶೆಟ್ಟಿ ಅವರು, ಚಿತ್ರದಲ್ಲಿ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂಬುದರ ಕುರಿತಂತೆಯೂ ಸ್ಪಷ್ಟನೆ ನೀಡಿದ್ದು, ಕಾಪಿರೈಟ್ಸ್ ಗೆ ಇದು ಒಳಪಡುವುದಿಲ್ಲ ಎಂದಿದ್ದಾರೆ.