ಅದೃಷ್ಟವಶಾತ್ ಮಕ್ಕಳು ಪಾರು
ಪ್ರತಿನಿಧಿ ವರದಿ ಸೋಮವಾರಪೇಟೆ
ಸಂಜೆ ಪಟ್ಟಣದ ಹೊರವಲಯದ ಜೇನಿಗರಕೊಪ್ಪದಲ್ಲಿ ಶುಕ್ರವಾರ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಸಂಜೆ ವೇಳೆಗೆ ವಾಹನದಲ್ಲಿ ಮರಳಿ ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ಸುಮಾರು 30 ವಿದ್ಯಾರ್ಥಿಗಳು ಪಾರಾಗಿದ್ದಾರೆ. ಓರ್ವ ವಿದ್ಯಾರ್ಥಿಯ ಕಾಲಿಗೆ ಪೆಟ್ಟಾಗಿದೆ.
ಪಟ್ಟಣದಿಂದ ಕಿಬ್ಬೆಟ್ಟ, ಕಾಗಡಿಕಟ್ಟೆ, ಗೆಜ್ಜೆಹಣಕೋಡು, ಚಿಕ್ಕತೋಳೂರು ಮಾರ್ಗದಲ್ಲಿ, ಶಾಲಾ ದಿನಗಳಲ್ಲಿ ಚಲಿಸುವ ವಾಹನ ಇದಾಗಿದ್ದು, ಸಂಜೆ ಜೇನಿಗರಕೊಪ್ಪದಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರಿಗೆ ಸ್ಥಳಾವಕಾಶ ಒದಗಿಸುವ ಸಲುವಾಗಿ ಚಾಲಕ ಎಡಬದಿಗೆ ಚಲಿಸಿದ್ದಾನೆ. ಮಳೆ ಹಿನ್ನೆಲೆ ರಸ್ತೆಯ ಬದಿಯಲ್ಲಿ ಕೆಸರು ಕಟ್ಟಿದ್ದು, ಶಾಲಾ ವಾಹನವನ್ನು ಎಡಬದಿಗೆ ಎಳೆದಿದೆ. ಪರಿಣಾಮ ರಸ್ತೆ ಬದಿಯ ಚರಂಡಿಗೆ ಇಳಿದ ವಾಹನ ಎಡ ಬದಿಗೆ ಪಲ್ಟಿಯಾಗಿದೆ. ಮಕ್ಕಳು ಹರಸಾಹಸ ಪಟ್ಟು ವಾಹನದಿಂದ ಹೊರ ಬಂದಿದ್ದಾರೆ. ಘಟನೆಯಿಂದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ನಂತರ ಸ್ಥಳೀಯರು ವಾಹನವನ್ನು ಮೇಲೆತ್ತಿದ್ದಾರೆ.
ಚಿತ್ರ : ಪಲ್ಟಿಯಾಗಿರುವ ಶಾಲಾ ವಾಹನ