ಪ್ರತಿನಿಧಿ ಸುದ್ದಿ ಮಡಿಕೇರಿ
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆ ಪರಿಗಣಿಸಿ ದೇಶದ ಪ್ರತಿಷ್ಠಿತ ಐಟಿ ಇನ್ಫಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಕಂಪನಿ ಆಫ್ ದಿ ಇಯರ್ ಪ್ರಶಸ್ತಿಗೆ ಕೊಡಗು ಮೂಲದ ಯುವ ಉದ್ಯಮಿ ರೋಹಿತ್ ಆನಂದ್ ಭಾಜನರಾಗಿದ್ದಾರೆ.
ರೋಹಿತ್ ಆನಂದ್ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುರ್ವರ್ಕ್ಸ್ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಪ್ರಶಸ್ತಿಗೆ ಭಾಜನವಾಗಿದೆ.
ಹೈದಾರಬಾದ್ನಲ್ಲಿರುವ ತಾಜ್ ಕೃಷ್ಣದಲ್ಲಿ ಜು.೨೬ ರಂದು ಆಯೋಜಿತ ಕಾರ್ಯಕ್ರಮದಲ್ಲಿ ತೇಲಂಗಾಣ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಿ.ಶ್ರೀಧರ್ ಬಾಬು ಪ್ರಶಸ್ತಿ ಪ್ರದಾನ ಮಾಡಿದರು. ಸುರ್ವರ್ಕ್ಸ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಕಳೆದ ಹದಿನೈದು ವರ್ಷದಿಂದ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ದೇಶದ ೨೭
ಕಡೆಗಳಲ್ಲಿ ಶಾಖೆ ಹೊಂದಿದೆ. ಚೀನಾ ಹಾಗೂ ದುಬೈಯಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಒಟ್ಟು ೪೦೦ ಉದ್ಯೋಗಿಗಳಿದ್ದಾರೆ.
ಇನ್ಫೀನ್ ಗ್ಲೋಬಲ್ ಗ್ರೂಪ್ ಹಾಗೂ ಔಟ್ಲುಕ್ ಮಾಧ್ಯಮ ಸಂಸ್ಥೆಯು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವುದರ ಮೂಲಕ ರೋಹಿತ್ ಆನಂದ್ ನೇತೃತ್ವದ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಇಂಟರ್ನ್ಯಾಷನಲ್ ಸ್ಟಾರ್ಟ್ಅಪ್ ಫೌಂಡೇಶನ್ ಚೇರ್ಮನ್ ಜೆ.ಎ. ಚೌಧರಿ ಪಾಲ್ಗೊಂಡಿದ್ದರು.
ಶ್ರೀಮಂಗಲ ಪದವಿ ಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಯಾಗಿರುವ ರೋಹಿತ್ ಆನಂದ್, ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ್ ಅವರ ಪುತ್ರ.
ಚಿತ್ರ: ೪ಎಂಡಿಕೆಎ೪: ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಕೊಡಗು ಮೂಲದ ಯುವ ಉದ್ಯಮಿ ರೋಹಿತ್ ಆನಂದ್ ದೇಶದ ಪ್ರತಿಷ್ಠಿತ ಐಟಿ ಇನ್ಫಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಕಂಪನಿ ಆಫ್ ದಿ ಇಯರ್ ಪ್ರಶಸ್ತಿಯನ್ನು ತೇಲಂಗಾಣ ರಾಜ್ಯದ ಮಾಹಿತಿ- ತಂತ್ರಜ್ಞಾನ ಖಾತೆ ಸಚಿವ ಡಿ.ಶ್ರೀಧರ್ ಬಾಬು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.