ಪ್ರತಿನಿಧಿ ವರದಿ ಮಡಿಕೇರಿ
ಕ್ರೋಧಿ ಸಂವತ್ಸರದ ಗ್ರೀಷ್ಮ ಋತುವಿನ ದಕ್ಷಿಣಾಯನ ಕರ್ಕಾಟಕ ಮಾಸ ಆಷಾಢ ಕೃಷ್ಣಪಕ್ಷದ ಅಮಾವಾಸ್ಯೆಯ ದಿನವಾದ ಇಂದು ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೊಲಿಂಕಾನ ಉತ್ಸವ ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ಎಸ್.ರವಿಕುಮಾರ್ ಅವರ ನೇತೃತ್ವದಲ್ಲಿ ಪೊಲಿಂಕಾನ ಉತ್ಸವ ಮತ್ತು ಮಹಾಪೂಜೆ ನಡೆಯಿತು. ತುಂಬಿ ಹರಿಯುತ್ತಿರುವ ಕಾವೇರಿಗೆ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಲಾಯಿತು.
ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎನ್.ಜಿ.ಚಂದ್ರಶೇಖರ್, ತಕ್ಕಮುಖ್ಯಸ್ಥ ಬಳ್ಳಡ್ಕ ಬಿ.ಸಿ.ಅಪ್ಪಾಜಿ, ಶ್ರೀ ತಲಕಾವೇರಿ ದೇವಾಲಯದ ತಕ್ಕಮುಖ್ಯಸ್ಥ ಕೋಡಿ ಯು.ಮೋಟಯ್ಯ, ಸಿಬ್ಬಂದಿ, ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.