ಮಕ್ಕಳಿಗೆ ಶ್ರೀ ಶಂಬುನಾಥ ಸ್ವಾಮೀಜಿ ಸಲಹೆ
ಪ್ರತಿನಿಧಿ ವರದಿ ಬೇಲೂರು
ಮಕ್ಕಳು ಉತ್ತಮ ಶಿಕ್ಷಣದ ಜತೆಗೆ, ಸಂಸ್ಕಾರವನ್ನು ಕಲಿಯಬೇಕು. ಆಗ ಮಾತ್ರ ತಾವು ಕಲಿತಂತ ವಿದ್ಯೆಗೆ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಪಟ್ಟಣದ ಆರ್ವಿ ಕನ್ವೆಷನ್ ಹಾಲ್ನಲ್ಲಿ ನಡೆದ ಪ್ರಥಮ ವರ್ಷದ ಸ್ವಾಗತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಿಇಟಿ ನೀಟ್ ಜೆಇ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಾವು ಕಲಿತಂತ ವಿದ್ಯೆ ನಿಂತ ನೀರಾಗದೆ, ಅದು ಹರಿಯುವಂತಾಗಬೇಕು. ಸಂಸ್ಕಾರಯುತ ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ ಆಗಬೇಕೆ ಹೊರತು ಅದು ಜೀವನವನ್ನು ಭಾಧಿಸುವಂತಾಗಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಂಠಿತವಾಗುತ್ತಿದೆ. ಹಿಂದೆ ತಮಗೆ ಜೀವನಕ್ಕೆ ದಾರಿದೀಪವಾದ ಗುರುಗಳನ್ನು ತಂದೆ-ತಾಯಿಗಳನ್ನು ವೇದಿಕೆ ಮೇಲೆ ಕರೆದು ಇವರು ನನ್ನ ಗುರುಗಳು, ಇವರು ನನ್ನ ತಂದೆ-ತಾಯಿ ಎಂದು ಅವರು ಮಾಡಿದ ಸಾಧನೆ ದಿನದಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರನ್ನಾಗಿ ಮಾಡಲು ಕೂಲಿ ಮಾಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿದ ತನ್ನ ತಂದೆ ಯಾರು ಎಂಬುದನ್ನು ಮರೆತು, ಯಾರೋ ಒಬ್ಬರನ್ನು ಇವರೇ ನನ್ನ ತಂದೆ, ತಾಯಿ ಎಂದು ತೊರಿಸುವ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಕೇವಲ ಶಿಕ್ಷಣ ಕಲಿತು ವಿದ್ಯಾವಂತರಾಗದೆ ಸಾಲದು ಸಂಸ್ಕಾರಯುತ ಶಿಕ್ಷಣ ಎಲ್ಲಿ ದೊರೆಯುತ್ತದೊ ಅಲ್ಲಿ ಮೌಲ್ಯಯುತವಾಗಿ ಬದುಕಲು ಸಾಧ್ಯ. ಕೇವಲ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾವಂತರಾಗಬೇಡಿ. ಏನನ್ನಾದರೂ ಸಾಧಿಸುವ ಛಲದೊಂದಿಗೆ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಹೇಮಚಂದ್ರ ಮಾತನಾಡಿ, ಕೇವಲ ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಪೋಷಕರು ಕನಸು ಕಾಣುತ್ತಾರೆ. ಏಕೆ ನಿಮ್ಮ ಮಕ್ಕಳು ಪ್ರಾಧ್ಯಾಪಕರಾಗಬಾರದು, ಇದರ ಜತೆ ನಿಮ್ಮ ಕನಸು ಐಎಎಸ್, ಐಪಿಎಸ್, ಎಂಬ ಬಹುದೊಡ್ಡ ಕನಸನ್ನು ಹೊತ್ತು ಇಂತಹ ಸ್ಪರ್ದಾತ್ಮಕ ಯುಗದಲ್ಲಿ ಮುನ್ನುಗ್ಗಿದ್ದಾಗ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.
ಈ ವೇಳೆ ೨೦೨೩-೨೪ನೇ ಸಾಲಿನಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗಾಜ್, ಬಿಜಿಎಸ್ ಪ್ರಾಂಶುಪಾಲರಾದ ದಿವ್ಯ ಕುಮಾರ್, ಉಪನ್ಯಾಸಕರು ಹಾಜರಿದ್ದರು.