ಮಸ್ತಾರೆ ಲೋಕೇಶ್ ಸ್ಪಷ್ಟನೆ
ಪ್ರತಿನಿಧಿ ವರದಿ ಸಕಲೇಶಪುರ
ಇತ್ತೀಚೆಗೆ ಅತಿಯಾದ ಮಳೆಯಿಂದ ತಾಲೂಕಿನ ಕೆಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿರುವುದಕ್ಕೆ ರೆಸಾರ್ಟ್ ಹಾಗೂ ಹೋಂ ಸ್ಟೇಗಳೇ ಕಾರಣ ಎಂದು ಬಿಂಬಿಸಲಾಗುತ್ತಿರುವುದು ಸರಿಯಾದ ಕಾರಣವಲ್ಲ ಎಂದು ಸಕಲೇಶಪುರ ರೆಸಾರ್ಟ್ ಓನರ್ ಅಸೋಸಿಯೇಷನ್ ಅಧ್ಯಕ್ಷ ಮಸ್ತಾರೆ ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವು ಕಾರ್ಯಕ್ರಮ ಪ್ರಾರಂಭಿಸಿರುವುದು ನಿಜಕ್ಕೂ ಅಭಿನಂದನಾರ್ಹ. ತಾಲೂಕಿನಲ್ಲಿ ನಾವು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನಮ್ಮ ಹಿಡುವಳಿ ಭೂಮಿಗಳಲ್ಲಿ ವಹಿವಾಟನ್ನು ಮಾಡುತ್ತಿದ್ದೇವೆ. ಯಾವುದೇ ಅರಣ್ಯ ಅತಿಕ್ರಮಣವನ್ನು ನಾವು ಮಾಡಿಲ್ಲ. ಅರಣ್ಯ ಒತ್ತುವರಿಯನ್ನು ಬೆಂಬಲಿಸುವುದಿಲ್ಲ. ಆದರೆ ನೈಸರ್ಗಿಕ ವಿಕೋಪಗಳಿಂದ ಆಗುವ ಗುಡ್ಡ ಕುಸಿತ ಘಟನೆಗಳಿಗೆ ಹೋಂ ಸ್ಟೇ ಮತ್ತು ರೆಸಾರ್ಟುಗಳನ್ನೇ ಹೊಣೆ ಮಾಡುವುದು ಸಮಂಜಸವಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಪದೇ ಪದೆ ಒಂದು ಉದ್ಯಮದ ವಿರುದ್ಧವಾಗಿ ಮಾತನಾಡಿದರೆ ಸಾಮಾನ್ಯ ಜನರಲ್ಲಿಯೂ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದು ಹೇಳಿದರು.
ಗುಡ್ಡ ಕುಸಿತ ಪ್ರಕರಣಗಳಿಗೆ ಅದರದೇ ಆದ ಹಲವಾರು ಕಾರಣಗಳಿದ್ದು, ರಸ್ತೆ ವಿಸ್ತರಣೆ, ಪಶ್ಚಿಮ ಘಟ್ಟದಲ್ಲಿ ಎತ್ತಿನ ಹೊಳೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದು ಹಾಗೂ ಪವರ್ ಪ್ರಾಜೆಕ್ಟ್ ನಂತಹ ಇತರ ಅಭಿವೃದ್ದಿ ಯೋಜನೆ ಅಡಿಯಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಇದನ್ನು ಸುಖಾ ಸುಮ್ಮನೆ ನಮ್ಮಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.
ಹೋಂ ಸ್ಟೇ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಅರಣ್ಯ ಪ್ರದೇಶ ಅತಿಕ್ರಮಿಸಿ ಯಾವುದೇ ಹೋಂ ಸ್ಟೇ ರೆಸಾರ್ಟ್ ಗಳನ್ನು ನಿರ್ಮಿಸಿದ್ದರೆ ಅವುಗಳ ತೆರವು ಕಾರ್ಯಾಚರಣೆಯನ್ನು ನಾವು ಖಂಡಿತವಾಗಿ ಸ್ವಾಗತಿಸುತ್ತೇವೆ. ಅದಕ್ಕೆ ನಮ್ಮ ಬೆಂಬಲ ಕೂಡ ಇದೆ. ನಮ್ಮ ಖಾಸಗಿ ಜಮೀನುಗಳಲ್ಲಿ ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಉದ್ಯಮ ನಡೆಸುತ್ತಿದ್ದೇವೆ. ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರ ಆದೇಶದಿಂದ ರೆಸಾರ್ಟ್ ಬರುವ ಅತಿಥಿಗಳು ಬುಕ್ಕಿಂಗ್ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರೆಸಾರ್ಟ್ ಸಂಘದ ಕಾರ್ಯದರ್ಶಿ ಕಾಡುಮಕ್ಕಿ ಹರೀಶ್ ಮಾತನಾಡಿ, ಅನಧಿಕೃತ ರೆಸಾರ್ಟ್ ಹೋಂ ಸ್ಟೇ ಇದ್ದಲ್ಲಿ ಕ್ರಮ ಕೈಗೊಳ್ಳಲಿ ಹಾಗೂ ಯಾವುದೇ ವ್ಯಕ್ತಿಗಳು ಸಾರ್ವಜನಿಕ ಪ್ರದೇಶದಲ್ಲಿ ಅರಣ್ಯದಲ್ಲಿ ಅನುಚಿತ ವರ್ತನೆ ಬಗ್ಗೆ ಅರಣ್ಯ ಇಲಾಖೆ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.