ಸಹಾಯಹಸ್ತ ನೀಡಿದ ರೆಡ್ಕ್ರಾಸ್ ಸಂಸ್ಥೆ
ಪ್ರತಿನಿಧಿ ವರದಿ ಹಾಸನ
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಘಟಕವು ಸಕಲೇಶಪುರ ತಾಲೂಕು ರೆಡ್ಕ್ರಾಸ್ ಘಟಕದ ಸಹಯೋಗದೊಂದಿಗೆ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ತುರ್ತು ಸಹಾಯ ನೀಡುವ ಹಿನ್ನೆಲೆಯಲ್ಲಿ ಸಂಪೂರ್ಣ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್, ಟಾರ್ಪಲ್, ಪಾತ್ರೆಗಳು, ಹಾಸಿಗೆ, ಹೊದಿಕೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಸಕಲೇಶಪುರ ತಾಲೂಕಿನ ತಹಸೀಲ್ದಾರ್ ಕಚೇರಿಯಿಂದ ಅಧಿಕೃತ ಮತ್ತು ಅನಧಿಕೃತ ಪೂರ್ಣ ಹಾನಿಗೊಳಗಾದ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಮನೆಗಳನ್ನು ಅಯ್ಕೆ ಮಾಡಿಲಾಗಿತ್ತು. ತಾತ್ಕಾಲಿಕ ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ರೆಡ್ ಕ್ರಾಸ್ ಘಟಕದ ಸಭಾಪತಿ ಹೆಮ್ಮಿಗೆ ಮೋಹನ್ ಅವರ ನೇತೃತ್ವದಲ್ಲಿ ತಾಲೂಕಿನ ಕಸಬಾ ಹೋಬಳಿ, ಬೆಳಗೊಡು, ಕೆ.ಹೊಸಕೋಟೆ ಹೋಬಳಿಗಳ ಕೆಲಗಳಲೆ, ಹೆಬ್ಬನಹಳ್ಳಿ, ಕೌಡಹಳ್ಳಿ, ಹೊಸಗದ್ದೆ, ಗೊಳಗೊಂಡ, ಶಾಂತಪುರ, ಜಾನಕೆರೆ, ಕೋಗರವಳ್ಳಿ ಗ್ರಾಮಗಳ ಒಟ್ಟು 10 ಬಡಕುಟುಂಬಗಳಿಗೆ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಉಳಿದ ತಾಲೂಕುಗಳಿಗೂ ರೆಡ್ ಕ್ರಾಸ್ ತಂಡ ಭೇಟಿ ನೀಡಿ ಪೂರ್ಣ ಹಾನಿಯಾಗಿರುವ ಮನೆಗಳನ್ನು ಗುರುತಿಸಿ ಅವರಿಗೆ ಮುಂದಿನ ಹತ್ತು ದಿನಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಘಟಕದ ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಜಿ ಎಚ್.ಡಿ.ಜಯೇಂದ್ರ ಕುಮಾರ್, ನಿರ್ದೇಶಕರಾದ ಕೆ.ಟಿ.ಜಯಶ್ರೀ, ಎಲ್.ಎಸ್.ನಿರ್ಮಲಾ, ಜಯಪ್ರಕಾಶ್, ಗಿರೀಶ್, ಗಿರಿಗೌಡ, ಸಂಚಾಲಕ ಹರ್ಷಿತ್ ಸಕಲೇಶಪುರ ತಾಲೂಕು ಘಟಕದ ಸಭಾಪತಿ ಶಾರದಾ ಗುರುಮೂರ್ತಿ, ಕಾರ್ಯದರ್ಶಿ ರೇಖಾ ಸುರೇಶ್, ನಿರ್ದೇಶಕ ಹರೀಶ್ ಮತ್ತಿತರರಿದ್ದರು.