ಸತತವಾಗಿ ಸುರಿದ ಮಳೆಯಿಂದಾಗಿ ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ತಂಬಾಕು ಬ್ಯಾರನ್ ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಕೆಲಸ ಮಾಡುತ್ತಿದ್ದ ರೈತರು ಪವಾಡಸದೃಶವಾಗಿ ಪಾರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಾಡಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯು ಸಾವಿರಾರು ಜನರ ಭವಿಷ್ಯವನ್ನು ಮೂರಾಬಟ್ಟೆ ಮಾಡಿದೆ, ಅದರಲ್ಲೂ ಕೇರಳದ ವೈನಾಡಿಗೆ ಹೊಂದಿಕೊಂಡಂತಿರುವ ಹೆಚ್ಡಿ ಕೋಟೆಗೆ ಈ ವರ್ಷ ರಣಭೀಕರ ಮಳೆ ಸುರಿದಿದ್ದು ಸಾಲ ಸೋಲ ಮಾಡಿ ಜೀವನ ಕಟ್ಟಿಕೊಳ್ಳಲು ವ್ಯವಸಾಯವನ್ನೇ ನಂಬಿಕೊಂಡಿದ್ದ ಸಾವಿರಾರು ರೈತರು ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.
ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದ ಶಿವಲಿಂಗೇಗೌಡ ರವರಿಗೆ ಸೇರಿದ ಬ್ಯಾರನ್ ಕುಸಿದು ಬಿದ್ದಿದೆ. ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ಬ್ಯಾರನ್ ಶಿಥಿಲಗೊಂಡಿದ್ದು, ಹೊಗೆ ಸೊಪ್ಪು ಹದ ಮಾಡುವ ಸಂದರ್ಭದಲ್ಲಿಯೇ ಕುಸಿದು ಬಿದ್ದಿದೆ. ಈ ಘಟನೆಯಿಂದಾಗಿ ಇದೀಗ ಮುಂದೇನು ಮಾಡಬೇಕೆಂದು ತೋಚದೆ ರೈತ ಶಿವಲಿಂಗೇಗೌಡ ಮತ್ತು ಕುಟುಂಬದವರು ಕಣ್ಣೀರಿಡುವಂತಾಗಿದೆ. ವಿವಿಧ ಬ್ಯಾಂಕುಗಳು ಮತ್ತು ಕೈ ಸಾಲ ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡ ರೈತ ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.