ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ.ತಾರಾ ಚಂದನ್ ವ್ಯಂಗ್ಯ
ಪ್ರತಿನಿಧಿ ವರದಿ ಹಾಸನ
ಹಗರಣಗಳ ನೆಪದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆ ಹಾಸ್ಯಾಸ್ಪದವಾಗಿದ್ದು, ಮುಡಾ ಪ್ರಕರಣದ ವಿರುದ್ಧ ನಮ್ಮ ವಿರೋಧವಿದೆ. ಆ.9ರಂದು ಮೈಸೂರಿನಲ್ಲಿ ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಿ.ತಾರಾ ಚಂದನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ಬಹುಮತದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಬಿಜೆಪಿ, ಜೆಡಿಎಸ್ ಪಕ್ಷಗಳು ಹುನ್ನಾರ ಮಾಡುತ್ತಿವೆ. ಜತೆಗೆ, ರಾಜ್ಯಪಾಲರು ಕೂಡ ಈ ವಿಚಾರವಾಗಿ ಸಿಎಂಗೆ ನೋಟಿಸ್ ನೀಡಿರುವುದು ತಪ್ಪು ನಿರ್ಧಾರವಾಗಿದೆ ಎಂದರು.
ಈ ವಿಚಾರದಲ್ಲಿ ಅಬ್ರಹಾಂ ಎಂಬುವವರು ನೀಡಿದ ದೂರಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ಅಬ್ರಹಾಂ ಎಂಬ ವ್ಯಕ್ತಿ ಈ ಹಿಂದೆ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡು ದಂಡ ಪಾವತಿಸಿದ ವ್ಯಕ್ತಿಯಾಗಿದ್ದು, ಈತನ ದೂರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇರಲಿಲ್ಲ ಎಂದು ಹೇಳಿದರು.
ಅನೇಕ ವರ್ಷಗಳಿಂದ ಹಲವು ಪ್ರಕರಣಗಳು ಬಾಕಿ ಇದ್ದರೂ ಅವುಗಳನ್ನು ಇತ್ಯರ್ಥ ಪಡಿಸುವ ಬದಲಾಗಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ, ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ಬೀಳಿಸುವ ಅವರ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಂದರು.
ಮಹಿಳಾ ಮುಖಂಡರಾದ ರಹೀಮಾ, ವಸಂತಾ ಕುಮಾರಿ, ಜಮೀಲಾ ಇದ್ದರು.