ಪ್ರೊ.ಎಸ್.ಆರ್.ತಮ್ಮಯ್ಯ ಸಲಹೆ । ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ
ಪ್ರತಿನಿಧಿ ವರದಿ ಹಾಸನ
ಪೋಷಕರ ಪರಿಶ್ರಮವನ್ನು ಮನದಟ್ಟು ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಬೇಕು ಎಂದು ಪ್ರೊ.ಎಸ್.ಆರ್.ತಮ್ಮಯ್ಯ ಸಲಹೆ ನೀಡಿದರು.
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಪಡುವ ಶ್ರಮದ ಬಗ್ಗೆ ಒಂದು ಬಾರಿ ಯೋಚಿಸಿದರೆ ಯಾವ ವಿದ್ಯಾರ್ಥಿಗಳು ಕೂಡ ಇರುವ ಅಲ್ಪ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಗುರಿಯನ್ನಿಟ್ಟುಕೊಂಡು ತಮ್ಮ ಓದಿನ ಕಡೆಗೆ ಗಮನ ನೀಡಿದರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಮಕ್ಕಳ ಗುರಿಯ ಹಿಂದೆ ಗುರುಗಳು ಮತ್ತು ಪೋಷಕರು ಇದ್ದು, ಇವರಿಬ್ಬರು ನೀಡುವ ಜ್ಞಾನವನ್ನು ಬಳಸಿಕೊಂಡರೆ ಉತ್ತಮ ಅವಕಾಶಗಳ ಜತೆಗೆ, ಉತ್ತಮ ವ್ಯಕ್ತಿತ್ವ ಲಭ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್ ಮಾತನಾಡಿ, ಉನ್ನತ ಶಿಕ್ಷಣದ ಬಹುಮುಖ್ಯ ಬುನಾದಿ ಪದವಿ ಶಿಕ್ಷಣವಾಗಿದ್ದು, ಈ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ ಪೂರ್ಣವಾದಂತಹ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ರೂಪಿಸಿಕೊಳ್ಳುವಂತಹ ಪದವಿ ಶಿಕ್ಷಣ ಅಗತ್ಯ. ಪದವಿ ಶಿಕ್ಷಣ ಕಲಿತು ಮನೆಯಲ್ಲಿ ಇರದೇ ಉದ್ಯೋಗಸ್ಥರಾಗುವುದರ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಡಾ.ಎನ್.ಎಸ್.ಶಶಿಕಲಾ, ಪ್ರೊ.ಎಸ್.ಆರ್.ಹೇಮಾವತಿ, ಪ್ರೊ.ವಾರಿಜ, ಡಾ.ಡಿ.ಪಿ.ಲಿಂಗರಾಜು ಇತರರಿದ್ದರು.