ಪ್ರತಿನಿಧಿ ವರದಿ ಬೇಲೂರು
ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಆರೋಗ್ಯ ಉಚಿತ ಪರೀಕ್ಷೆ ಶಿಬಿರಗಳನ್ನು ನಡೆಸಲು ನಿರ್ಧರಿಸಲಾಗಿದೆ. ಜತೆಗೆ, ನುರಿತ ವೈದ್ಯರಿಂದ ಆರೋಗ್ಯದ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು.
ಪಟ್ಟಣದ ಯಗಚಿ ಸೇತುವೆ ಬಳಿಯ ಲಯನ್ಸ್ ಭವನದಲ್ಲಿ ಮಾಸಿಕ ಸಭೆ ಹಾಗೂ ವಿಚಾರಗೋಷ್ಠಿ ಸಮಾರಂಭದಲ್ಲಿ ಮಾತನಾಡಿದ ಅವರು, ೧೫ ವರ್ಷದಿಂದ ಬೇಲೂರಿನ ಲಯನ್ಸ್ ಕ್ಲಬ್ ಆಯಾ ಅಧ್ಯಕ್ಷರ ಅವಧಿಯಲ್ಲಿ ವಿವಿಧ ಸೇವಾ ಕಾರ್ಯವನ್ನು ನಡೆಸುವ ಮೂಲಕ ಜನ ಮನ್ನಣೆಯನ್ನು ಪಡೆದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ನಮಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಹೆಚ್ಚು ಸೇವಾ ಚಟುವಟಿಕೆಗಳನ್ನು ನಿಮ್ಮಲ್ಲರ ಸಹಕಾರದಿಂದ ನಡೆಸುವ ಇಂಗಿತವನ್ನು ವ್ಯಕ್ತ ಪಡಿಸಿದರು.
ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಮಾತನಾಡಿ, ಬೇಲೂರು ಲಯನ್ಸ್ ಕ್ಲಬ್ ಇಡೀ ಲಯನ್ಸ್ ಜಿಲ್ಲೆಯಲ್ಲಿ ತನ್ನಯಾದ ಛಾಪು ಮೂಡಿಸಿದ ಹಿನ್ನೆಲೆಯಲ್ಲಿ ಸೇವಾಕಾರ್ಯ ನಡೆಸಲು ಜಾಗದ ಅಭಾವವಿತ್ತು. ಸದ್ಯ ಎಲ್ಲ ಪದಾಧಿಕಾರಿಗಳು ಸೇರಿ ನಿವೇಶನ ಖರೀದಿಸಿ, ಭವನ ಮುಕ್ತಾಯದ ಹಂತಕ್ಕೆ ಬಂದಿದೆ. ಆ.೧೬ ಹಾಗೂ ೧೭ರಂದು ಗೃಹ ಪ್ರವೇಶವನ್ನು ಸತ್ಯನಾರಾಯಣಸ್ವಾಮಿ ಪೂಜೆಯೊಂದಿಗೆ ಆರಂಭ ಮಾಡಲಾಗುತ್ತದೆ. ಬಳಿಕ ಶೀಘ್ರವೇ ಅಧಿಕೃತವಾಗಿ ಜಿಲ್ಲಾ ರಾಜ್ಯಪಾಲರ ಸಮಕ್ಷಮದಲ್ಲಿ ಲೋಕಾರ್ಪಣೆ ನಡೆಸಲಾಗುತ್ತದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ವೈ.ಬಿ.ಸುರೇಶ್, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ್ ಶೆಟ್ಟಿ, ಮಾಜಿ ಅಧ್ಯಕ್ಷ ಎಂ.ಪಿ.ಪೂವಯ್ಯ ಮುಂತಾದವರು ಇದ್ದರು.
ಪೋಟೋ: ಬೇಲೂರು ಲಯನ್ಸ್ ಕ್ಲಬ್ ವತಿಯಿಂದ ನಡೆದ ಮಾಸಿಕೆ ಸಭೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿದರು.