ಪಿ.ಶಿವಾನಂದ ಸಲಹೆ । ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ
ಪ್ರತಿನಿಧಿ ವರದಿ ಕೊಟ್ಟಿಗೆಹಾರ
ಪರಿಸರ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿಸುತ್ತದೆ. ಗಿಡಗಳ ನೆಡುವಿಕೆಯಿಂದ ಉತ್ತಮ ಪರಿಸರ ದೊರೆಯುತ್ತದೆ. ಇದರಿಂದ ಪ್ರಕೃತಿ ವಿಕೋಪ ತಡೆಯಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನೆಯಾಧಿಕಾರಿ ಪಿ.ಶಿವಾನಂದ ಅಭಿಪ್ರಾಯಪಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮೂಡಿಗೆರೆ, ಅರಣ್ಯ ಇಲಾಖೆಯ ವತಿಯಿಂದ ಬಣಕಲ್ ಸುಭಾಷನಗರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ 5 ಸಾವಿರ ಗಿಡಗಳನ್ನು ವಿತರಿಸಲಾಗಿದೆ. ಆಧುನಿಕತೆಯ ಪ್ರಭಾವದಿಂದ ಮರಗಿಡಗಳಿಂದ ಮತ್ತು ಹಸಿರು ಪರಿಸರದಿಂದ ಕಂಗೊಳಿಸುತ್ತಿದ್ದ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿಯ ನೆಪದಲ್ಲಿ ಕಾಂಕ್ರಿಟ್ ಕಾಡುಗಳಾಗುತ್ತಿವೆ. ರಸ್ತೆ ಅಭಿವೃದ್ಧಿ, ಮನೆ ನಿರ್ಮಾಣ, ವಿದ್ಯುತ್ ಮಾರ್ಗಗಳ ಅನುಷ್ಠಾನ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಮರಗಿಡಗಳನ್ನು ಕಡಿಯಲಾಗುತ್ತಿದೆ. ಇದರಿಂದ ಪರಿಸರ ವಿಕೋಪವಾಗಿ ಅಂತರ್ಜಲ ಕ್ಷೀಣಿಸುತ್ತಿದೆ ಎಂದರು.
ಉಪವಲಯ ಅರಣ್ಯ ಅಧಿಕಾರಿ ಉಮೇಶ್ ಮಾತನಾಡಿ, ಪರಿಸರ ವಿನಾಶವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಿಸುವ ಜಾಗೃತಿ ಅಭಿಯಾನ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ನಡೆಸುತ್ತಿರುವುದು ಶ್ಲಾಘನೀಯ. ಶಾಲೆಗಳ ಹಂತದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ವಿದ್ಯಾರ್ಥಿಗಳು ಇತರ ಜನರಿಗೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜೆಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್.ಶೆಟ್ಟಿ ಮಾತನಾಡಿದರು. ಬಣಕಲ್ ಗ್ರಾಪಂ ಅಧ್ಯಕ್ಷೆ ಅತಿಕಾಭಾನು ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ತಾಲೂಕು ಕೃಷಿ ಅಧಿಕಾರಿ ಗೋವಿಂದ ನಾಯ್ಕ, ಬಣಕಲ್ ಎಎಸೈ ಎಂ.ಆರ್.ರವಿ, ಶೌರ್ಯ ವಿಪತ್ತು ನಿರ್ವಹಣ ಘಟಕದ ನಾಯಕ ಕೆ.ಎಲ್.ರವಿ, ಸಂಯೋಜಕ ಪ್ರವೀಣ್ ಪೂಜಾರಿ, ಬಣಕಲ್ ಎ ಘಟಕದ ಅಧ್ಯಕ್ಷೆ ಭಾರತಿ, ಬಿ ಒಕ್ಕೂಟದ ಅಧ್ಯಕ್ಷ ಚಂದ್ರಪ್ಪ, ವಲಯ ಮೇಲ್ವಿಚಾರಕ ಸಂದೀಪ್, ರವಿ ಪೂಜಾರಿ, ಸೇವಾ ಪ್ರತಿನಿಧಿ ಎಸ್.ಎನ್.ರವಿ ಮತ್ತಿತರರಿದ್ದರು