ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ
ಪ್ರತಿನಿಧಿ ವರದಿ ಬೇಲೂರು
ಶಾಸಕ ಎಚ್.ಕೆ.ಸುರೇಶ್ ಅವರು ಹೆಸರು ತಾಲೂಕಿನಲ್ಲಿ ಶಾಶ್ವತವಾಗಿ ಉಳಿಯಬೇಕೆಂದರೆ ನೀರಾವರಿ ಯೋಜನೆಯ ಕೆಲಸಗಳನ್ನು ಸಂಪೂರ್ಣವಾಗಿ ಮಾಡಿಸಬೇಕು ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದದರು.
ಏತ ನೀರಾವರಿ ಯೋಜನೆ ಮೂಲಕ ಮಾದಿಹಳ್ಳಿ-ಹಳೇಬೀಡು ಹೋಬಳಿ ಕೆರೆಗಳನ್ನು ತುಂಬಿಸಲು ತಾಲೂಕಿನ ಹಾಲ್ತೊರೆ ಗ್ರಾಮದಲ್ಲಿರುವ ಮೋಟಾರ್ ಪಂಪ್ಸೆಟ್ನಿಂದ ನೀರು ಹರಿಸಲು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಶಾಸಕ ಎಚ್.ಕೆ.ಸುರೇಶ್ ಅವರು ಬಂದ ನಂತರ ಉತ್ತಮ ಮಳೆಯಾಗಿದೆ. ಕೆರೆಗಳು ತುಂಬಿ ಒಳ್ಳೆ ಬೆಳೆಯಾಗುತ್ತಿದೆ. ಹಳೇಬೀಡು ಕೆರೆ ತುಂಬುವ ಸಾಧ್ಯತೆ ಇದ್ದು, ರೈತರಿಗೆ ನೀರು ನಿರಂತರವಾಗಿ ಸಿಗಲಿದೆ. ಅಧಿಕಾರಿಗಳು ಮೋಟಾರ್ ಪಂಪ್ ಅನ್ನು ನಿಲ್ಲಸದೆ ನಿರಂತರವಾಗಿ ನೀರು ಹರಿಸಬೇಕು. ಎತ್ತಿನ ಹೊಳೆ ಯೋಜನೆಯಿಂದ ಚಿಕ್ಕಬಳ್ಳಾಪುರ-ಕೋಲಾರಕ್ಕೆ ನೀರು ಹೋಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಯೋಜನೆಯಿಂದ ತಾಲೂಕಿನಲ್ಲಿರುವ ಆ ಭಾಗದ ಕೆರೆಗಳನ್ನು ತುಂಬಿಸಲು ಅಲ್ಲಲ್ಲಿ ಪಾಯಿಂಟ್ಗಳನ್ನು ಮಾಡಿಸಲು ಶಾಸಕರು ಮುಂದಾಗಬೇಕು ಎಂದು ಹೇಳಿದರು.
ಯಗಚಿ ಜಲಾಶಯ ತುಂಬಿರುವುದರಿಂದ ಅದರ ಉಪಯೋಗವನ್ನು ಪಡೆಯಬೇಕು. ಹಾಗೂ ರಾಜ್ಯದಲ್ಲಿ ಎಲ್ಲೆಲ್ಲಿ ನೀರಾವರಿ ಯೋಜನೆ ಇದೆಯೋ ಅಲ್ಲಿಗೆ ಸರ್ಕಾರದಿಂದ ೫ ಕೋಟಿ ರೂ. ಅನುದಾನ ಮೀಸಲಿಟ್ಟರೆ ಅಲ್ಲಿ ಕೆಲಸಗಳನ್ನು ಸುಗಮವಾಗಿ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಸಚಿವರು ಗಮನ ಹರಿಸಬೇಕು. ಜತೆಗೆ, ಹಳೇಬೀಡು ಸಮೀಪದ ರಾಜನಶಿರಿಯೂರು ಭಾಗಕ್ಕೆ ಏತ ನೀರಾವರಿ ಯೋಜನೆ ತರುವುದಕ್ಕೆ ಶಾಸಕರು ನಿಯೋಗ ಕರೆದೊಯ್ದು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಬೇಕಿದೆ ಎಂದರು.
ಯಗಚಿ ನೀರಾವರಿ ಯೋಜನಾ ವಿಭಾಗದ ಇಇ ಪುನೀತ್, ಎಇ ಪ್ರವೀಣ್, ನವೀನ್, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜು, ಬಿಜೆಪಿ ಜಲ್ಲಾ ಉಪಾಧ್ಯಕ್ಷ ಹಗರೆ ಡಿ.ಶಾಂತ್ ಕುಮಾರ್, ತಾಪಂ ಮಾಜಿ ಸದಸ್ಯ ವಿಜಯ್ ಕುಮಾರ್, ಗ್ರಾಪಂ ಅಧ್ಯಕ್ಷ ಸಂಜು, ರೈತ ಮುಖಂಡರಾದ ವಿಜಯ್ ಕುಮಾರ್, ಕುಮಾರ್, ನಾಗಚಂದ್ರ, ಛಲವಾದಿ ಪುಟ್ಟರಾಜು, ಕೆರೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹರೀಶ್ ಸೇರಿದಂತೆ ಇತರರಿದ್ದರು.
ಏತ ನೀರಾವರಿ ಯೋಜನೆ ಮೂಲಕ ಹಳೇಬೀಡು-ಮಾದಿಹಳ್ಳಿ ಹೋಬಳಿಯ ೨೬ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಣಘಟ್ಟ ಯೋಜನೆ ಕಾಮಗಾರಿ ಸ್ವಲ್ಪ ನೆನೆಗುದಿಗೆ ಬಿದ್ದಿದೆ. ಅದಕ್ಕೆ ಅನುದಾನ ತಂದು ಕೆಲಸ ಮಾಡಿಸಲಾಗುವುದು. ಹೆಬ್ಬಾಳು ಏತ ನೀರಾವರಿ ಯೋಜನೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರವಾಗಿ ಯೋಜನೆ ಮಂಜೂರಿಗೆ ಕ್ರಮ ವಹಿಸಲಾಗುವುದು.
। ಎಚ್.ಕೆ.ಸುರೇಶ್, ಶಾಸಕ