ಪ್ರತಿನಿಧಿ ವರದಿ ಚಿಕ್ಕಮಗಳೂರು
ಅರಣ್ಯ ಒತ್ತುವರಿ, ಅಕ್ರಮ ಬಡಾವಣೆ, ಹೋಂ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಇದಕ್ಕೂ ಮುನ್ನ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಜಂಟಿ ಸಮೀಕ್ಷೆ ಮಾಡಬೇಕು ಎಂದು ಹೋಂ ಸ್ಟೇ ಅಸೋಸಿಯೇಷನ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಅಧಿಕ ಮಳೆಯಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳ ಹಿನ್ನೆಲೆಯಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾದ ಬಡಾವಣೆ, ತೋಟ ಹೋಂ ಸ್ಟೇ, ರೆಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಹೊರಟಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಿಲುವನ್ನು ಸ್ವಾಗತಿಸುತ್ತೇವೆ. ಯಾವುದು ಅರಣ್ಯ, ಯಾವುದು ಕಂದಾಯ ಭೂಮಿ ಎನ್ನುವ ಗೊಂದಲವೇ ಇನ್ನೂ ಬಗೆಹರಿಯದ ಸಂದರ್ಭದಲ್ಲಿ ಸರ್ಕಾರ ಈ ರೀತಿ ಆದೇಶ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದು ಅಸಾಧ್ಯ ಎಂದಿದ್ದಾರೆ.
1985-90ರ ದಶಕದಲ್ಲಿ ಗೋಮಾಳ ಸೇರಿದಂತೆ ವಿವಿಧ ಸರ್ಕಾರಿ ಜಮೀನುಗಳನ್ನು ಅವೈಜ್ಞಾನಿಕವಾಗಿ ಡೀಮ್ಡ್, ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಅಂತಹ ಜಮೀನಿನಲ್ಲೂ ಹಿಂದಿನಿಂದಲೂ ತೋಟಗಳನ್ನು ಮಾಡಿಕೊಂಡವರು ಸಾಕಷ್ಟು ಜನ ಇದ್ದಾರೆ. ಜಂಟಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ಇತ್ಯರ್ಥ ಪಡಿಸಿದಲ್ಲಿ ಅಂತಹ ಜಮೀನಿನಲ್ಲಿ ತೋಟ ಮಾಡಿಕೊಂಡಿರುವವರು ಗುತ್ತಿಗೆ ಯೋಜನೆಯ ಲಾಭ ಪಡೆಯಲು ಅವಕಾಶವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.