ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ದಡದಹಳ್ಳಿ ದಿವಾಕರ್ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ಗನ್ನಿ ಉಮೇಶ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ದಿವಾಕರ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಜಿ.ಆರ್.ಹರೀಶ್ ಅವಿರೋಧವಾಗಿ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ದಿವಾಕರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರು, ಬೀದಿದೀಪ ಹಾಗೂ ಚರಂಡಿ ಸ್ವಚ್ಛತೆ ಸೇರಿದಂತೆ ಅಗತ್ಯ ಸೌಕರ್ಯಗಳಿಗೆ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಸದಸ್ಯರ ಸಲಹೆ ಪಡೆದು ಗ್ರಾಮಗಳ ಅಭಿವೃದ್ಧಿಗೆ ನೂತನ ಅಧ್ಯಕ್ಷರು ಶ್ರಮಿಸಬೇಕು. ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಅತ್ಯುತ್ತಮವಾಗಿ ಕೆಲಸಗಳನ್ನು ಮಾಡುವ ಮೂಲಕ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್, ಮಾಜಿ ಉಪಾಧ್ಯಕ್ಷ ನಲ್ಲೂರು ದಿನೇಶ್, ಸದಸ್ಯರಾದ ಶೋಭಾ, ಮಂಜುಳಾ, ಗಿಡ್ಡಮ್ಮ, ರಾಜೇಶ್, ಪ್ರಕಾಶ್, ಕುಮಾರ್, ಮಣಿಕಂಠ, ಸಂತೋಷ್, ಭಾಗ್ಯಮ್ಮ, ಸರಸ್ವತಿ, ಚಂದ್ರಮ್ಮ, ಶ್ರೀಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಅಕೌಂಟೆಂಟ್ ಜನಿವಾರ ರಾಜು, ಕರ ವಸೂಲಿಗಾರ ಸಂತೋಷ್, ಜೆಡಿಎಸ್ ಮುಖಂಡರಾದ ಜಿ.ಕೆ.ಕುಮಾರ್, ದಡದಹಳ್ಳಿ ಪ್ರಕಾಶ್, ವಾಸು, ಸತೀಶ್, ಆನಂದ್ ಇತರರಿದ್ದರು.