ತಾಲೂಕು ದಂಡಾಧಿಕಾರಿ ಕೆ.ಕೆ.ಕೃಷ್ಣಮೂರ್ತಿ ಮನವಿ
ಪ್ರತಿನಿಧಿ ವರದಿ ಹೊಳೆನರಸೀಪುರ
78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸಲು ಎಲ್ಲ ಇಲಾಖೆಯ ಮುಖ್ಯಸ್ಥರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಮಾಧ್ಯಮದವರು ಸಹಕಾರ ನೀಡಬೇಕು ಎಂದು ತಾಲೂಕು ದಂಡಾಧಿಕಾರಿ ಕೆ.ಕೆ.ಕೃಷ್ಣಮೂರ್ತಿ ಮನವಿ ಮಾಡಿದರು.
ಶುಕ್ರವಾರ ಸಂಜೆ ತಮ್ಮ ಕಛೇರಿಯಲ್ಲಿ ನಡೆದ ಸ್ವಾತಂತ್ರೋತ್ಸವ ಹಾಗೂ ದಿವಂಗತ ಡಿ.ದೇವರಾಜು ಅರಸ್ ಜನ್ಮದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅ.15ರ ಬೆಳಗ್ಗೆ ಭಾರತಾಂಭೆಯ ಭಾವಚಿತ್ರದೊಂದಿಗೆ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆಯು ಪಟ್ಟಣದ ಚೆನ್ನಾಂಬಿಕ ವೃತ್ತದಿಂದ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ, ಹಾಸನ ಮೈಸೂರು ರಸ್ತೆಯ ಅಂಬೇಡ್ಕರ್ ವೃತ್ತದಿಂದ, ಜಯಚಾಮರಾಜೇಂದ್ರ ವೃತ್ತದ ಮಹಾತ್ಮ ಗಾಂಧಿ ಬಳಿಯಿಂದ, ಅರಕಲಗೂಡು ರಸ್ತೆ ಮಾರ್ಗವಾಗಿ ಬಯಲು ರಂಗಮಂದಿರದಲ್ಲಿ ಸಮಾವೇಶಗೊಳ್ಳುವುದು.
ಪುರಸಭೆ ವತಿಯಿಂದ ಪಟ್ಟಣದಲ್ಲಿ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಜಗಜೀವನರಾಂ ವೃತ್ತದಲ್ಲಿ, ಪುರಸಭೆಯ ಕಟ್ಟಡಗಳ ಮೇಲೆ ವಿದ್ಯುತ್ ದ್ವೀಪಾಲಂಕಾರ ಮಾಡುವುದು. ಪಟ್ಟಣದಲ್ಲಿ ತಳಿರು-ತೋರಣಗಳಿಂದ ಶೃಂಗಾರ ಮಾಡುವುದು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಚತೆ, ವೇದಿಕೆ ಹಾಗೂ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಶಾಮಿಯಾನ ಮತ್ತು ಆಸನದ ವ್ಯವಸ್ಥೆ ಮಾಡಿಸಲು ಸೂಚಿಸಲಾಯಿತು. ವೇದಿಕೆ ಅಲಂಕಾರಕ್ಕೆ ತೋಟಗಾರಿಕೆ ಇಲಾಖೆಯಿಂದ ಹೂವಿನ ಕುಂಡಗಳನ್ನು ಇಡುವಂತೆ ಸೂಚಿಸಲಾಯಿತು. ಮೆರವಣಿಗೆ ಸಾಗುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಮಾಡಲು ಆರಕ್ಷಕ ಉಪನಿರೀಕ್ಷಕರಿಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ದಿವಂಗತ ಡಿ.ದೇವರಾಜ್ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಅತಿಹೆಚ್ಚು ಅಂಕಗಳಿಸಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ನಿರ್ಣಯಿಸಲಾಯಿತು. ದಿವಂತ ಡಿ.ದೇವರಾಜ್ ಅರಸು ಅವರ ಬಗ್ಗೆ ಭಾಷಣ, ಪ್ರಬಂಧ, ರಸಪ್ರಶ್ನೆ, ಕಾರ್ಯಕ್ರಮ ಆಯೋಜನೆ ಮಾಡಿ ವಿಜೇತ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ನೀಡಿ ಗೌರವಿಸಲು ನಿರ್ಣಯಿಲಾಯಿತು.
ವಿವಿಧ ಇಲಾಖಾ ಮುಖ್ಯಸ್ಥರುಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.