ಪ್ರತಿನಿಧಿ ವರದಿ ಹೊಳೇನರಸೀಪುರ
ಮಕ್ಕಳಲ್ಲಿ ವಿದ್ಯೆಯ ಜತೆಗೆ ಮಾನವೀಯ ಮೌಲ್ಯಗಳು ಜಾಗೃತವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿನ ಎಂ.ಎಂ.ಎ.ಕೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಶಿಸ್ತು, ಸಂಯಮ, ಸೇವಾ ಮನೋಭಾವನೆಯಂತಹ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ನಾಗರೀಕರಾಗಿ ಹೊರಹೊಮ್ಮಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎ.ಕಾಳೇಗೌಡ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ ಉತ್ತಮ ವಿದ್ಯಾವಂತ, ಜ್ಞಾನವಂತರಾಗಿ ಎಲ್ಲೆಡೆ ಬೆಳಗಬೇಕು. ನಾಡು, ನುಡಿ, ಸಮಾಜಕ್ಕೆ ನಿಮ್ಮ ಸೇವೆ ಸದ್ವಿನಿಯೋಗವಾಗಬೇಕು ಎಂದು ತಿಳಿಸಿದರು.
ದಾನಿ ಸುಪ್ರೀತ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲು ಹತ್ತಬೇಕು. ಸಂವಿಧಾನದ ಮೌಲ್ಯಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಡಿನ, ದೇಶದ ಸತ್ಪ್ರಜೆಗಳಾಗಿ ಬೆಳಗಬೇಕು. ನಾಡಿಗೆ, ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸಬೇಕು. ನೊಂದವರಿಗೆ, ಅಶಕ್ತರಿಗೆ ದಾರಿದೀಪವಾಗಬೇಕು ಎಂದು ನುಡಿದರು.
ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಡಿ.ಸಿ.ಮಹೇಶಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಸಿ.ಕೃಷ್ಣಯ್ಯ, ಸಿ.ಆರ್.ಪಿ.ಕೃಷ್ಣಮೂರ್ತಿ, ಪುರಸಭೆ ಸದಸ್ಯ ಉಮೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ಸಾಹಿತಿ ಎಂ.ಜಿ.ಪರಮೇಶ್, ಶಿಕ್ಷಕರಾದ ಪುಷ್ಪಲತ, ನಿರ್ಮಲಾದೇವಿ, ಆರ್.ಬಿಂದು, ಜ್ಯೋತಿಲಕ್ಷ್ಮಿ, ಶಾಲಾ ಸಿಬ್ಬಂದಿ, ಮಕ್ಕಳು ಉಪಸ್ಥಿತರಿದ್ದರು.