ನಗಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾಹಿತಿ
ಪ್ರತಿನಿಧಿ ವರದಿ ಚಿಕ್ಕಮಗಳೂರು
ನಗರಸಭೆ ವತಿಯಿಂದ ಕಂದಾಯ ವಸೂಲಾತಿಯನ್ನು ಡಿಜಿಟಲಿಕರಣಗೊಳಿಸಲಾಗಿದ್ದು, ಆನ್ಲೈನ್ ಮೂಲಕ ಕಂದಾಯ ಪಾವತಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ನಗಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದ್ದಾರೆ.
ನಗರಸಭೆ ಸಭಾಂಗಣದಲ್ಲಿಂದು ಕಂದಾಯ ವಸೂಲಾತಿ ಸಿಬ್ಬಂದಿಗಳೀಗೆ ಡಿಜಿಟಲ್ ಪೇಮೆಂಟ್ ಯಂತ್ರಗಳನ್ನು ವಿತರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಇಡೀ ರಾಜ್ಯದಲ್ಲಿಯೆ ಮೊಟ್ಟ ಮೊದಲ ಭಾರಿಗೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಚಿಕ್ಕಮಗಳೂರು ನಗರಸಭೆಯಲ್ಲಿ ಈ ಕಾರ್ಯವನ್ನು ಆರಂಬಿಸಲಾಗಿದೆ. ಈ ಮೊದಲು ನಮ್ಮ ಸಿಬ್ಬಂದಿಗಳು ನಗರ ಸಭೆ ವ್ಯಾಪ್ತಿಯ ಮನೆಗಳಿಗೆ ತೆರಳಿ ಕಂದಾಯ ಪಡೆದು ಹಣವನ್ನು ಬ್ಯಾಂಕಿಗೆ ಜಮೆ ಮಾಡಿ ಆ ರಶೀದಿಯನ್ನು ತಂದು ನಗರಸಭೆಗೆ ನೀಡಬೇಕಿತ್ತು.
ಇದರಲ್ಲಿ ಕೆಲವೊಮ್ಮೆ ಗೊಂದಲಗಳು ವ್ಯತ್ಯಾಸಗಳು ಆಗುತ್ತಿದ್ದವು. ಇದನ್ನು ಸರಳೀಕರಣಗೊಳಿಸಲು ಮತ್ತು ಯಾವುದೆ ವ್ಯತ್ಯಾಸಗಳು ಹಣಕಾಸಿನ ವಿಚಾರದಲ್ಲಿ ಆಗದಂತೆ ಮಾಡಲು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸಿಬ್ಬಂದಿಗಳು ಯಂತ್ರಗಳನ್ನು ತೆಗೆದುಕೊಂಡು ಮನೆಗಳಿಗೆ ತೆರಳುತ್ತಾರೆ. ಜನರು ತಮ್ಮ ಗೂಗಲ್ ಪೇ, ಪೋನ್ ಪೇ ಮುಖಾಂತರ ಆನ್ಲೈನ್ ಪೇಮೆಂಟ್ ಮಾಡಬಹುದು. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದರು.
ಇನ್ನು ನಗರಸಭೆಯ ಮಳಿಗೆಗಳಲ್ಲಿ ಕೆಲ ಬಾಡಿಗೆದಾರರು ಬಾಡಿಗೆ ಪಾವತಿಸದೆ ಉಳಿಸಿಕೊಂಡಿದ್ದಾರೆ. ಮುಂದಿನ 7 ದಿನಗಳಲ್ಲಿ ಪಾವತಿ ಮಾಡದಿದ್ದರೆ, ಅಂತಹ ಮಳಿಗೆಗಳನ್ನು ರದ್ದು ಮಾಡಿ ಮರುಹಂಚಿಕೆ ಮಾಡಲಾಗುವುದು ಎಂದವರು ತಿಳಿಸಿದ್ದರು.