ಪ್ರಯಾಣಿಕರ ರೈಲ್ವೆ ಇಲಾಖೆಗೆ ಹಿಡಿಶಾಪ । ಬಸ್, ಖಾಸಗಿ ವಾಹನದಲ್ಲಿ ಪ್ರಯಾಣಕ್ಕೆ ನಿರ್ಧಾರ
ಹಣವಿಲ್ಲದವರು ಪಾಡು ಕೇಳುವವರಿಲ್ಲ
ಪ್ರತಿನಿಧಿ ವರದಿ ಆಲೂರು
ಶುಕ್ರವಾರ ರಾತ್ರಿ ಶಿರಾಡಿಘಾಟ್ ಪ್ರದೇಶದಲ್ಲಿ ಹಳಿಗಳ ಮೇಲೆ ಪುನಃ ಮಣ್ಣು ಕುಸಿದ ಕಾರಣದಿಂದ ರೈಲುಗಳ ಓಡಾಟಕ್ಕೆ ದಿಡೀರ್ ತಡೆ ಒಡ್ಡಲಾಯಿತು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಆಲೂರು ನಿಲ್ದಾಣದಲ್ಲಿ ಶನಿವಾರ ಬೆಳಗಿನ ಜಾವ ಸುಮಾರು 4.30 ರಿಂದ ಮಧ್ಯಾಹ್ನ 12 ರವರೆಗೆ ನಿಂತ ಪರಿಣಾಮ ಪ್ರಯಾಣಿಕರು ಬಹಳ ತೊಂದರೆಗೊಳಗಾದರು.
ನಿಲ್ದಾಣದಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದಿರುವುದರಿಂದ ಸಾವಿರಾರು ಪ್ರಯಾಣಿಕರು ರೈಲಿನ ಶೌಚಾಲಯದಲ್ಲಿ ನೀರಿಲ್ಲದೆ ಬಹಿರ್ದೆಸೆಗೆ ಪರದಾಡುವಂತಾಯಿತು. ನಿಲ್ದಾಣದಲ್ಲಿ ಯಾವುದೇ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರೀಕರು ಸೇರಿದಂತೆ ಸಾವಿರಾರು ಜನರು ಹಸಿವಿನಿಂದ ಬಳಲಿ ಕುಡಿಯಲು ನೀರಿಲ್ಲದೆ ಪರದಾಡಿದರು.
ಪ್ರಯಾಣಿಕರ ಸಂಕಷ್ಟ ಅರಿತ ಆಲೂರು ರಾಧಮ್ಮ ಜನಸ್ಪಂದನೆ ವೇದಿಕೆ ಅಧ್ಯಕ್ಷ ಹೇಮಂತ್ ಕುಮಾರ್ , ಮಲ್ನಾಡ್ ಶಾಡೊ ಸಂಪಾದಕ ನವೀನ್ ಬೈರಾಪುರ ಹಾಗೂ ನಿತಿನ್ ರವರ ಸಹಕಾರ ಪಡೆದು, ಬೆಳಗ್ಗೆ 9 ಗಂಟೆಯೊಳಗೆ 1000 ಬಾಟಲಿ ಕುಡಿಯವ ನೀರು, ಊಟದ ವ್ಯವಸ್ಥೆ, 300ಕ್ಕೂ ಹೆಚ್ಚು ಬಿಸ್ಕೆಟ್ ಪ್ಯಾಕೆಟ್ಗಳನ್ನು ಉಚಿತವಾಗಿ ಪ್ರಯಾಣಿಕರಿಗೆ ನೀಡಿ ಮಾನವೀಯತೆ ಮೆರೆದರು. ನಂತರ ರೈಲ್ವೆ ಇಲಾಖೆ ಸಿಬ್ಬಂದಿಗಳು ಬಿಸ್ಕೆಟ್, ತಿಂಡಿ ಕೊಟ್ಟರು. ಸ್ಪಂದನೆಗೆ ಸ್ಪಂದಿಸಿದ ಹೈರಾಣಾಗಿದ್ದ ಪ್ರಯಾಣಿಕರು ತುಸು ನೆಮ್ಮದಿ ಉಸಿರು ಬಿಟ್ಟರು. ಆದರೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗಿ ರೈಲ್ವೆ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದರು.
ರೈಲ್ವೆ ಇಲಾಖೆಯವರು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸೂಕ್ತ ಮಾಹಿತಿ ನೀಡದ ಪರಿಣಾಮದಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿ, ಕೆಲವರು ಆಲೂರು ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಲ್ಲಿ ಪ್ರಯಾಣಿಸಲು ಮುಂದಾದರೆ, ಇನ್ನೂ ಕೆಲವರು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ತಮ್ಮ ಗ್ರಾಮಗಳಿಗೆ ತೆರಳಿದರು. ಹಣವಿಲ್ಲದವರು ವಿಧಿ ಇಲ್ಲದೆ ರೈಲು ನಿಲ್ದಾಣದಲ್ಲಿ ಜಾತಕ ಪಕ್ಷಿಗಳಂತೆ ಕಾಯಬೇಕಾಯಿತು.
ಸಂಚಾರ ಆರಂಭಿಸಿ 2ದಿನಕ್ಕೆ ಗುಡ್ಡ ಕುಸಿತ: ಇತ್ತೀಚೆಗೆ ಭಾರಿ ಮಳೆಯಿಂದ ರೈಲು ಮಾರ್ಗದಲ್ಲಿ ಗುಡ್ಡಗಳು ಕುಸಿದ ಕಾರಣದಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಓಡಾಡುತ್ತಿದ್ದ ರೈಲುಗಳು 10 ದಿನಗಳಿಂದ ರದ್ದಾಗಿದ್ದವು. ಮಣ್ಣು ತೆರವು ಮಾಡಿದ ನಂತರ ಪುನಃ ರೈಲುಗಳ ಓಡಾಟಕ್ಕೆ ಹಸಿರು ನಿಶಾನೆ ತೋರಲಾಗಿತ್ತು. ಓಡಾಟ ಪ್ರಾರಂಭವಾದ ಎರಡು ದಿನಗಳಲ್ಲಿ ಪುನಃ ಗುಡ್ಡ ಕುಸಿತ ಉಂಟಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
——————
ಕೋಟ್
ಆಲೂರು ಪಟ್ಟಣದಲ್ಲಿ ಪ್ರತಿನಿತ್ಯ ಸಂಚರಿಸುವ ಎಲ್ಲ ರೈಲುಗಳ ನಿಲುಗಡೆಗೆ ಅವಕಾಶ ನೀಡಿ ಅಂಗಡಿ ಹೋಟೆಲ್ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟರೆ, ಈ ರೀತಿಯ ತೊಂದರೆ ಪ್ರಯಾಣಿಕರಿಗೆ ಆಗುತ್ತಿರಲಿಲ್ಲ. ಪಟ್ಟಣದ ಮುಖ್ಯ ಕೇಂದ್ರಗಳಲ್ಲಿ ರೈಲುಗಳ ನಿಲುಗಡೆ ಬಗ್ಗೆ ನಾಮಫಲಕ ಹಾಕಿದರೆ, ರೈಲುಗಳ ನಿಲುಗಡೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಲಿದೆ.
– ಕೆ.ಜಿ. ನಾಗರಾಜ್, ವಕೀಲರು, ಆಲೂರು.
ಆಲೂರು ತಾಲೂಕು ಕೇಂದ್ರವಾಗಿದ್ದು ರೈಲು ನಿಲ್ದಾಣವಿದ್ದರೂ ಕೇವಲ ರೆವಿನ್ಯೂ ದೊರಕುತ್ತಿಲ್ಲ ಎಂಬ ಮೂಲ ಉದ್ದೇಶದಿಂದ ರೈಲುಗಳ ನಿಲುಗಡೆಯಾಗುತ್ತಿರಲಿಲ್ಲ. ಕೇಂದ್ರ ಮಂತ್ರಿಗಳು, ಕೆಲ ಜನಪ್ರತಿನಿದಿಗಳ ಸಹಕಾರದೊಂದಿಗೆ ಹೋರಾಟ ಮಾಡಿದ ಪರಿಣಾಮ ಕೇವಲ ಯಶವಂತಪುರ-ಕಾರವಾರ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಯಿತು. ಆದರೆ ನಿಲ್ದಾಣದಲ್ಲಿ ಶಾಶ್ವತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲಾಖೆ ಮುಂದಾಗದೆ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈಗಲಾದರೂ ಜನಪ್ರತಿನಿಧಿಗಳು ಗಮನಹರಿಸಿ, ಸಂಚರಿಸುವ ಎಲ್ಲ ರೈಲುಗಳು ಆಲೂರು ನಿಲ್ದಾಣದಲ್ಲಿ ನಿಲ್ಲುವಂತೆ ಮತ್ತು ಮೂಲ ಸೌಕರ್ಯಗಳು ಒದಗಿಸುವಂತೆ ಕ್ರಮ ವಹಿಸಬೇಕು.
– ಹೇಮಂತಕುಮಾರ್, ಅಧ್ಯಕ್ಷ, ರಾಧಮ್ಮ ಜನಸ್ಪಂದನ ವೇದಿಕೆ ಆಲೂರು.
ಆಕಸ್ಮಿಕವಾಗಿ ಘಟಿಸುವ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಪ್ರಯಾಣಿಕರ ಕಷ್ಟಗಳಿಗೆ ಸ್ಪಂದಿಸುವುದು ಮಾನವೀಯತೆ. ರೈಲ್ವೆ ಇಲಾಖೆ ಆಲೂರು ನಿಲ್ದಾಣವನ್ನು ಪರಿಗಣಿಸಿ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು. ಮುಖ್ಯ ರಸ್ತೆಯಿಂದ ನಿಲ್ದಾಣಕ್ಕೆ ಸಂಚರಿಸುವ ರಸ್ತೆಗೆ ಮಾರ್ಗಸೂಚಿಯೊಂದಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.
– ನವೀನ್, ಭೈರಾಪುರ.
ಫೋಟೋ: ಆಲೂರು ರೈಲ್ವೆ ನಿಲ್ದಾಣದಲ್ಲಿ ಆಯಾಸಗೊಂಡ ಪ್ರಯಾಣಿಕರಿಗೆ ಉಚಿತ ತಿಂಡಿ, ಕುಡಿಯುವ ನೀರು ನೀಡುತ್ತಿರುವುದು.