ಪ್ರತಿನಿಧಿ ವರದಿ ಚಿಕ್ಕಮಗಳೂರು
ಇತ್ತೀಚೆಗೆ ನಿಧನ ಹೊಂದಿದ ಪತ್ರಕರ್ತ ಜಿ.ವಿ.ಚೂಡಾನಾಥ ಅಯ್ಯರ್ ಅವರು ನಿರ್ಭೀತ ಪತ್ರಿಕೋದ್ಯಮ ನಡೆಸಿ ಜತೆಗೆ, ಸಾಮಾಜಿಕವಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಪರಿಚಿತರಾಗಿ ಉಳಿದಿದ್ದಾರೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ ಹೇಳಿದರು.
ನಗರದ ಬ್ರಹ್ಮಸಮುದ್ರ ರಂಗಣ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಚೂಡಾನಾಥ ಅಯ್ಯರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟು-ಸಾವಿನ ಮಧ್ಯೆ ಹೆಜ್ಜೆ ಗುರುತು ಮೂಡಿಸಿದವರು ಅನೇಕರ ಹೃದಯಗಳಲ್ಲಿ ಹೃದಯಸ್ತರಾಗುತ್ತಾರೆ. ಹಾಗೆಯೇ ಅಯ್ಯರ್ ಅವರು ಒಳ್ಳೆಯ ಪತ್ರಿಕೆಯನ್ನು ನಡೆಸುವ ಮೂಲಕ ಅನೇಕರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.
ಅಯ್ಯರ್ ತುಂಬಾ ಧೈರ್ಯವಂತ ಮನುಷ್ಯರಾಗಿದ್ದರು. ಎಷ್ಟೇ ಕೋಪ ಮಾಡಿಕೊಂಡರು ಅಷ್ಟೇ ಬೇಗನೆ ಮೃಧುವಾಗಿಬಿಡುತ್ತಿದ್ದರು. ಯಾರ ಮೇಲೂ ದ್ವೇಷ ಸಾಧಿಸಿದವರಲ್ಲ. ಈ ಕಾರಣಕ್ಕೆ ಅವರ ಪತ್ರಿಕೆ, ಬರಹ ಎಂದಿಗೂ ಬ್ಲಾಕ್ ಮೇಲ್ ಎನಿಸಲಿಲ್ಲ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಸಂಪಾದಕಿ ವಾಣಿ ಚಂದ್ರಯ್ಯ ನಾಯ್ಡು, ಪತ್ರಕರ್ತ ಸಿ.ಸುರೇಶ್, ರಾಜ್ಯ ಕಾರ್ಯದರ್ಶಿ ಸೀತಾರಾಂ ಭರಣ್ಯ, ಸುಗಮ ಸಂಗೀತ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ, ಹಾಸನದ ರಾಷ್ಟ್ರಸೇವಿಕಾ ಸಮಿತಿಯ ಶಾಂತಕ್ಕ, ಭಂಡೀಗಡಿ ಶಿವಸ್ವಾಮಿ ಇತರರು ಅಯ್ಯರ್ ಅವರಿಗೆ ನುಡಿ ನಮನ ಸಲ್ಲಿಸಿದರು.
ಅಯ್ಯರ್ ಅವರ ಹಿರಿಯ ಪುತ್ರ ರಾಜೀವ್ ಅಯ್ಯರ್ ಮತ್ತು ಮೊಮ್ಮಗ ಪ್ರತೀಕ್ ಅನಿಸಿಕೆಗಳನ್ನು ಹಂಚಿಕೊಂಡರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಚಿ.ಸ.ಪ್ರಭುಲಿಂಗಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ರೇಖಾ ಪ್ರೇಂಕುಮಾರ್ ಹಾಗೂ ಸುಗಮ ಸಂಗೀತ ಗಂಗಾದ ಸಂಚಾಲಕ ಸುಮಾ ಪ್ರಸಾದ್ ಗಾಯನ ನಡೆಸಿಕೊಟ್ಟರು. ಸೀತಾರಾಂ ಅವಧಾನಿ ಸೇರಿದಂತೆ ಅಯ್ಯರ್ ಅವರ ಪತ್ನಿ ಯಶೋದಾ ಇತರರು ಭಾಗವಹಿಸಿದ್ದರು.