ಮೈಸೂರು: ಗ್ಯಾರಂಟಿ ಯೋಜನೆಯಿಂದಲೇ ಗೆದ್ದಿರುವ ಕಾಂಗ್ರೆಸ್ ಪಕ್ಷವನ್ನ ರಾಜ್ಯದ ಜನರೇ ಪರಿಷ್ಕರಣೆ ಮಾಡುತ್ತಾರೆ ಎಂದು ಮಾಜಿ ಶಾಸಕ ಹಾಗೂ ಮೈಸೂರು ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಮುಂದಾಗಿರುವ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಗೆದ್ದಿರೋದೇ ಗ್ಯಾರಂಟಿ ಯೋಜನೆಯಿಂದ, ಈಗ ಪರಿಷ್ಕರಣೆ ಮಾಡ್ತೇವೆ ಎಂದರೆ ಏನರ್ಥ? ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬಾರದು. ಕೊಟ್ಟ ಮಾತಿನಂತೆ ನೀವು ಗ್ಯಾರಂಟಿ ಯೋಜನೆ ಮುಂದುವರೆಸಬೇಕು. ಇಲ್ಲವಾದರೆ
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನೇ ಪರಿಷ್ಕರಣೆ ಮಾಡುತ್ತಾರೆ ಎಂದ ಅವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸರ್ಕಾರ ಮುಂದಾದರೆ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತದೆ ಎಂದರು.
ಇದೇ ವೇಳೆ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೇಲ್ನೋಟಕ್ಕೆ ಈ ರೀತಿ ಕಂಡು ಬರುತ್ತದೆ.
ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಬಿಜೆಪಿ ಪಕ್ಷದಲ್ಲಿ ಒಂದು ತತ್ವ ಸಿದ್ದಾಂತ ಇದೆ ಎಲ್ಲರು ಅದನ್ನ ಒಪ್ಪಿಕೊಂಡು ಕೆಲಸ ಮಾಡಬೇಕು ಎಂದರು. ಬಿಜೆಪಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಯಾರು ಹೇಳಿಕೆ ಕೊಡಬಾರದು. ಕೇಂದ್ರದ ನಾಯಕರು ಇದೆಲ್ಲವನ್ನ ಸರಿಪಡಿಸುತ್ತಾರೆ. ಪಕ್ಷದ ವಿರುದ್ಧ ಮಾತಾಡಿದವರನ್ನ ಕಿತ್ತು ಬಿಸಾಕುವ ಕೆಲಸವನ್ನ ಪಕ್ಷ ಮಾಡಿದೆ. ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ ಎಂದು ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ ನಡೆಯನ್ನ ಖಂಡಿಸಿದರು.