ಮೈಸೂರು: ಮೈಸೂರಿನ ದೇವರಾಜ ಅರಸು ರಸ್ತೆ ಮತ್ತು ದಿವಾನ್ಸ್ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಬೈಕ್ ಮತ್ತು ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದ ಕಾರಣ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಕಳೆದ ಭಾನುವಾರ (ನಿನ್ನೆ) ಬೆಳಗಿನ ಜಾವ 3:30 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದ ನಿವಾಸಿ ಉಲ್ಲಾಸ್ ಸಾಗರ್ (27) ಮೃತ ದುರ್ದೈವಿ.
ಮೃತ ಉಲ್ಲಾಸ್ ಸಾಗರ್ ಖಾಸಗಿ ಕಂಪನಿಯ ಉದ್ಯೋಗಿ. ಹಿಂಬದಿ ಕುಳಿತಿದ್ದ ವರ್ಷಗೆ (36) ಕೆಲ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಿವಾನ್ಸ್ ರಸ್ತೆ ಕಡೆಯಿಂದ ಸಾಗಿಬಂದ ಬೈಕ್, ದೇವರಾಜ ಅರಸು ರಸ್ತೆಯಿಂದ ಜೆ ಎಲ್ ಬಿ ರಸ್ತೆಯತ್ತ ಸಾಗುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಹಿನ್ನೆಲೆ ಸ್ಥಳದಲ್ಲೆ ಉಲ್ಲಾಸ್ ಸಾಗರ್ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ದೃಶ್ಯ ಸಮೀಪದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪ್ರಕರಣದ ಸಂಬಂಧ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.