ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಪಾಪಿಗಳು ದನದ ಕೊಟ್ಟಿಗೆಗೆ ಮಧ್ಯರಾತ್ರಿ ಬೆಂಕಿ ಇಟ್ಟಿರುವ ಕಾರಣ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜೋಡೆತ್ತು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವಿಗೀಡಾಗಿದೆ.
ಹೊಸಹಳ್ಳಿ ಗ್ರಾಮಕ್ಕೆ ಗದ್ದೆ ಕೆಲಸಕ್ಕೆ ತನ್ನ ಜೋಡೆತ್ತುಗಳೊಂದಿಗೆ ಬಂದಿದ್ದ ಸಿಂಧುವಳ್ಳಿ ಸಿದ್ದರಾಜು. ಗದ್ದೆ ಕೆಲಸ ಮುಗಿಸಿ ವಾಪಸ್ ತೆರಳಲು ಸಂಜೆಯಾಗಿತ್ತು. ಇದರಿಂದ ಸ್ವಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಹೊಸಹಳ್ಳಿ ಗ್ರಾಮದಲ್ಲಿ ತನ್ನ ಜೋಡೆತ್ತುಗಳನ್ನು ಸಾಕಮ್ಮ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಉಳಿದುಕೊಂಡಿದ್ದಾರೆ.
ನಿನ್ನೆ ಮಧ್ಯರಾತ್ರಿಯ ಸಮಯದಲ್ಲಿ ಕಿಡಿಗೇಡಿಗಳು ಜೋಡೆತ್ತುಗಳಿದ್ದ ಕೊಟ್ಟಿಗೆಗೆ ಬೆಂಕಿ ಇಟ್ಟ ಕಾರಣ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜೋಡೆತ್ತು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವಿಗೀಡಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ಕಳೆದುಕೊಂಡ ರೈತ ಸಿದ್ದರಾಜು ಕಂಗಾಲಾಗಿದ್ದಾನೆ. ಅಲ್ಲದೆ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಹಾಗೂ ಸೂಕ್ತ ಪರಿಹಾರ ನೀಡವುಂತೆ ರೈತ ಮನವಿ ಮಾಡಿದ್ದಾನೆ.
ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ರೈತ ಸಿದ್ಧರಾಜು ದೂರು ದಾಖಲಿಸಿದ್ದು,
ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.