ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ನಿನ್ನೆ(ಆ.20) ಅದ್ಧೂರಿ ಚಾಲನೆ ಸಿಕ್ಕಿದೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಧ್ವಜಾರೋಹಣ ನೇರವೇರಿಸುವ ಮೂಲಕ ರಾಯರ 7 ದಿನಗಳ ಆರಾಧನೆಗೆ ಚಾಲನೆ ನೀಡಿದ್ದಾರೆ.
ಗೋವು, ಗಜ, ಅಶ್ವ, ಒಂಟೆ ಧಾನ್ಯ ಪೂಜೆಗಳೊಂದಿಗೆ ಗುರುರಾಘವೇಂದ್ರರ ಆರಾಧನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಆರಾಧನೆಯು ಆಗಸ್ಟ್ 18ರಿಂದ 24ರ ವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಮಠದ ಆವರಣವು ತಳಿರು ತೋರಣ, ಹೂವಿನ ಅಲಂಕಾರ, ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ 353 ವರ್ಷಗಳು ಸಂದ ಹಿನ್ನೆಲೆಯಲ್ಲಿ ಆರಾಧನಾ ಮಹೋತ್ಸವವನ್ನು 7 ದಿನಗಳ ಕಾಲ ಸಪ್ತರಾತ್ರೋತ್ಸವವಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯಾರಾಧನೆ, ಆಗಸ್ಟ್ 23ರಂದು ಉತ್ತರಾರಾಧನೆ ನಡೆಯಲಿದೆ.
ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿಂದು ಗುರು ರಾಯರ ಮಧ್ಯಾರಾಧನೆ ಸಂಭ್ರಮ ಜೋರಾಗಿದೆ. ಗುರು ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 353 ವರ್ಷ ತುಂಬಿದೆ. ಬೆಳಗ್ಗೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ಭರದಿಂದ ಜರುಗುತ್ತಿದೆ. ಹಾಗೇ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನೇತೃತ್ವದಲ್ಲಿ ಪೂಜೆ, ವೃಂದಾವನಕ್ಕೆ ಮಠದ ಶ್ರೀಗಳಿಂದ ವಿಶೇಷ ಮಹಾಪಂಚಾಮೃತ ಅಭಿಷೇಕ ನೆರವೇರಿದೆ. ಆರಾಧನಾ ಮಹೋತ್ಸವಕ್ಕೆ ಸ್ವರ್ಣ ಕವಚದಿಂದ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಮಠದ ಪ್ರಾಕಾರದಲ್ಲಿ ಗಜ, ರಜತ, ಚಿನ್ನದ ರಥೋತ್ಸವ ನಡೆಯಲಿದೆ.ಇನ್ನು ನಿನ್ನೆ ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನಿನ್ನೆ ಸಂಜೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವ ದಿನವನ್ನು ರಾಯರ ಪೂರ್ವಾಧನೆಯನ್ನಾಗಿ ಮಾಡಲಾಗುತ್ತಿದೆ.
ಉತ್ತರಾರಾಧನೆ ದಿನ ಮಠದ ರಥಬೀದಿಯಲ್ಲಿ ಮಹಾರಥೋತ್ಸವ ಜರುಗಲಿದ್ದು, 7 ದಿನಗಳವರೆಗೆ ಪ್ರತಿನಿತ್ಯ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಾಧನೆ ವೇಳೆ ಮಂತ್ರಾಲಯದೆಲ್ಲೆಡೆ ರಾಯರ ನಾಮಸ್ಮರಣೆ ಅನುರಣಿಸಲಿದೆ. ದೇಶ, ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ.