ಕಳೆದ ಬಾರಿ ಅಧಿಕಾರ ಹಿಡಿದ ಬಿಜೆಪಿ । ಇಬ್ಬರಿ ಯಾರಿಗೆ ಅಧಿಕಾರ । ಸಾರ್ವಜನಿಕ ವಲಯದಲ್ಲಿ ಲೆಕ್ಕಾಚಾರ
ವಿಶ್ವನಾಥ್ ಕೆ.ಎಸ್. ಭಾರದ್ವಾಜ್ ಗುಂಡ್ಲುಪೇಟೆ
ಪಟ್ಟಣದ ಪುರಸಭೆ ಆಡಳಿತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಧಿಕಾರ ಬಹುಮತವಿರುವ ಬಿಜೆಪಿಗೆ ಸಿಗುವುದೊ ಅಥವಾ ಕಾಂಗ್ರೆಸ್ ಪಾಲಿಗೊ ಎಂಬ ಚರ್ಚೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.
ಈ ಹಿಂದೆ ಕ್ಷೇತ್ರದಲ್ಲಿ ಸಿ.ಎಸ್.ನಿರಂಜನ್ ಕುಮಾರ್ ಶಾಸಕರಾಗಿದ್ದ ಸಂದರ್ಭದಲ್ಲಿ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಪಡೆದಿದ್ದು, ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದ ಸದಸ್ಯ ಪಿ.ಶಶಿಧರ್ ಸಹ ಬಿಜೆಪಿಯನ್ನು ಬೆಂಬಲಿಸಿದಕ್ಕೆ ಬಿಜೆಪಿ ಅಧಿಕಾರ ಹಿಡಿದಿತ್ತು. ಆ ಸಂದರ್ಭದಲ್ಲಿ ಅಧ್ಯಕ್ಷ ಪಿ.ಗಿರೀಶ್ ಹಾಗೂ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್ ಕಾರ್ಯನಿರ್ವಹಿಸಿದ್ದರು.
ಈಗ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಘೋಷಣೆಯಾಗಿದೆ. ಪ್ರಸ್ತುತ ಸಂಖ್ಯಾ ಬಲನೋಡಿದಾಗ ಪಟ್ಟಣ ಪುರಸಭೆಯಲ್ಲಿ ಬಿಜೆಪಿ-13, ಕಾಂಗ್ರೆಸ್-8, ಎಸ್ಡಿಪಿಐ-1 ಮತ್ತು ಪಕ್ಷೇತರವಾಗಿ ಗೆದ್ದಿರುವ ಒಬ್ಬರು ಸದಸ್ಯರಿದ್ದಾರೆ.
ಬದಲಾದ ಪರಿಸ್ಥಿತಿ: ಪುರಸಭೆ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸದಸ್ಯ ರಮೇಶ್ ವಿಧಾನಸಭೆ ಚುನಾವಣೆ ಮುಂಚಿತವಾಗಿಯೇ ಕಾಂಗ್ರೆಸ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಪಕ್ಷೇತರಾಗಿ ಗೆದ್ದು ಬಿಜೆಪಿ ಬೆಂಬಲಿಸಿದ್ದ ಪಿ.ಶಶಿಧರ್ (ದೀಪು) ಕೂಡ ಕಾರಣಾಂತರಗಳಿಂದ ಬಿಜೆಪಿಯ ಯಾವುದೇ ಸಭೆ, ಸಮಾರಂಭ ಇತರ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ರಮೇಶ್ ಕಾಂಗ್ರೆಸ್ಗೆ ಮತ ಹಾಕಲು ಪಕ್ಷಾಂತರ ನಿಷೇಧ ಕಾಯಿದೆ ಅಡ್ಡ ಬರಲಿದೆ ಎನ್ನಲಾಗಿದೆ. ಹೀಗಾಗಿ ಸುಲಭವಾಗಿ ಅಧಿಕಾರ ಕೈ ಜಾರುವುದಿಲ್ಲ ಎಂಬ ನಂಬಿಕೆಯಲ್ಲಿ ಬಿಜೆಪಿ ಪಾಳಯವಿದೆ. ಆದರೂ ಸುಮ್ಮನೇ ಕೂರದೇ ರಾಜಕೀಯ ತಂತ್ರಗಾರಿಕೆ ಬಳಸುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಬಿಜೆಪಿ ಪಾಳಯದಲ್ಲಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಗೆಲುವಿನ ಲೆಕ್ಕಾಚಾರ: ಪುರಸಭೆಯಲ್ಲಿ ಕಾಂಗ್ರೆಸ್ 8 ಸದಸ್ಯರನ್ನು ಹೊಂದಿದ್ದು, ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಪಕ್ಷದ ಶಾಸಕ, ಸಂಸದರ ಇರುವುದರಿಂದ ಅವರಿಬ್ಬರ ಮತ ಸೇರಿದರೆ 10 ಮತಗಳಾಗಲಿದೆ. ಉಳಿದಂತೆ ಎಸ್ಡಿಪಿಐ ಸದಸ್ಯ ಬೆಂಬಲ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಪಕ್ಷೇತರ ಸದಸ್ಯ ಪಿ.ಶಶಿಧರ್ ಬೆಂಬಲಿಸಿದರೆ. 12 ಮತಗಳಾಗಲಿದೆ, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಕಾಂಗ್ರೆಸ್ನಲ್ಲಿ ಗುರುತಿಸಿಕೊಳ್ಳುತ್ತಿರುವ ರಮೇಶ್ ಬಿಜೆಪಿಯನ್ನು ಬೆಂಬಲಿಸದೆ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರೆ. ಕಾಂಗ್ರೆಸ್ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ! ಇದಕ್ಕಾಗಿ ಅಗತ್ಯ ತಂತ್ರಗಾರಿಕೆ ಕಾಂಗ್ರೆಸ್ ಪಾಳಯದಲ್ಲಿ ಸಹ ಮಾಡಲಾಗುತ್ತಿದೆ.
ಇಬ್ಬರಿಗೆ ಡಿಮ್ಯಾಂಡ್: ಪಟ್ಟಣ ಪುರಸಭೆಯ ಪಕ್ಷೇತರ ಸದಸ್ಯ ಪಿ.ಶಶಿಧರ್ ಬಿಸಿಎಂ(ಬಿ) ವರ್ಗಕ್ಕೆ ಸೇರಿದ್ದು, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡಿದವರಿಗೆ ತಮ್ಮ ಬೆಂಬಲ ಎಂಬ ಸಂದೇಶವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಮನಸ್ಸು ಇಲ್ಲ ಎನ್ನಲಾಗಿದೆ. ಇನ್ನು ಮತ್ತೊಬ್ಬ ಎಸ್ಡಿಪಿಐ ಸದಸ್ಯ ಕಾಂಗ್ರೆಸ್ ಬೆಂಬಲಿಸುವ ನಿರೀಕ್ಷೆ ಇದ್ದರು, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯರಲ್ಲೂ ಉಪಾಧ್ಯಕ್ಷರ ಸ್ಥಾನದ ಮೇಲೆ ಆಕಾಂಕ್ಷಿಗಳಿದ್ದಾರೆ. ಒಲವು ಯಾರ ಮೇಲಿದೆ ಎಂಬ ಅಂಶ ಕಾದು ನೋಡಬೇಕು.
ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರಿಗೆ ಪ್ರತಿಷ್ಠೆ: ತಾವು ಶಾಸಕರಾಗಿದ್ದಾಗ ಸಿಕ್ಕಾ ಪುರಸಭೆ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಶತ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಇದೀಗ ನೂತನವಾಗಿ ಕ್ಷೇತ್ರದಲ್ಲಿ ಅಲೆ ಸೃಷ್ಟಿಸಿರುವ ಹಾಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೂ ಪುರಸಭೆ ಅಧಿಕಾರ ದಕ್ಕಿಸಿಕೊಳ್ಳಬೇಕೆಂಬ ಮಹತ್ವಕಾಂಕ್ಷೆ ಇದೆ. ಹೀಗಾಗಿ ಎರಡು ಪಕ್ಷಗಳು ಅಧಿಕಾರ ಪಡೆದುಕೊಳ್ಳಲು ಪ್ರಯತ್ನಿಸಿದ್ದು, ಹಾಲಿ ಹಾಗೂ ಮಾಜಿ ಶಾಸಕರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಪಕ್ಷಗಳ ಹಾಗೂ ಪಕ್ಷೇತರ ಬಲಾಬಲ :
ಬಿಜೆಪಿ – 13
ಕಾಂಗ್ರೆಸ್ – 8
ಎಸ್ ಟಿ ಪಿ ಐ – 1
ಪಕ್ಷೇತರ -1
ಪುರಸಭಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸದಸ್ಯರು: ಇದೀಗ ಬಿಜೆಪಿ ಪಾಳಯದಿಂದ ಅಧ್ಯಕ್ಷ ಸ್ಥಾನಕ್ಕೆ ಪುರಸಭಾ ಸದಸ್ಯ ಕಿರಣ್ ಗೌಡ, ನಾಗೇಶ್, ವೀಣಾ ಮಂಜುನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ಪಾಳಯದಿಂದ ಪುರಸಭಾ ಸದಸ್ಯ ಮಧುಸೂದನ್ ಅಲ್ಲದೆ ಪಕ್ಷೇತರ ಸದಸ್ಯರಾಗಿರುವ ಪಿ.ಶಶಿಧರ್ ಆಕಾಂಕ್ಷಿಗಳಾಗಿದ್ದಾರೆ. ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುವುದು ಉಪಾಧ್ಯಕ್ಷರ ಸ್ಥಾನ ಯಾರಿಗೆ ಒಲಿಯುವುದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ-13 ಸ್ಥಾನಗಳನ್ನು ಪಡೆದಿದ್ದು, ಬಹುಮತ ಪಡೆದಿದೆ. ಯಾವ ಸದಸ್ಯರು ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳದೇ ಇರುವುದು ಬಿಜೆಪಿಗೆ ಸ್ವಲ್ಪ ಭರವಸೆಯನ್ನು ನೀಡಿದೆ. ಇದರಿಂದ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿ ಬಿಜೆಪಿ ಪಾಳಯ ವಿದೆ.
——————
ಕೋಟ್
ಪಟ್ಟಣ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯಲು ಪ್ರಯತ್ನ ಮಾಡಲಾಗುವುದು ಅಧಿಕಾರ ಸಿಗುತ್ತದೆ ಎಂಬ ವಿಶ್ವಾಸ ಇದೆ.
– ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ ಗುಂಡ್ಲುಪೇಟೆ ಕ್ಷೇತ್ರ
ಈಗಾಗಲೇ ಸಂಖ್ಯಾ ಬಲದಲ್ಲಿ ನಾವು ಮುಂದಿದ್ದು, ನಮ್ಮ ಪಕ್ಷದ ಪುರಸಭಾ ಸದಸ್ಯರು ಯಾವ ರಾಜಕೀಯ ಒತ್ತಡಕ್ಕೂ ಸಿಗದೇ ಪಕ್ಷದ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಖಂಡಿತವಾಗಲೂ ಬಿಜೆಪಿ ಪಕ್ಷ ಮತ್ತೊಮ್ಮೆ ಪುರಸಭಾ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸ ಇದೆ.
– ಸಿ.ಎಸ್.ನಿರಂಜನ್ ಕುಮಾರ್, ಮಾಜಿ ಶಾಸಕ ಗುಂಡ್ಲುಪೇಟೆ ಕ್ಷೇತ್ರ