ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಗಳು ಹರಿಗೆದರಿವೆ. ಮೊನ್ನೆಯಷ್ಟೇ ಮೈಸೂರಿಗೆ ಆಗಮಿಸಿದ್ದ ದಸರಾ ಗಜಪಡೆ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ, ರಾಜಗಾಂಭಿರ್ಯದಲ್ಲಿ ನಡೆದು ಅಂಬಾವಿಲಾಸ ಅರಮನೆ ತಲುಪಿವೆ.
ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಮೊನ್ನೆ(ಆ.21) ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೈಸೂರಿಗೆ ಆಗಮಿಸಿದ್ದ ಅಭಿಮನ್ಯು ಮತ್ತು ತಂಡ ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ 2 ದಿನಗಳು ವಾಸ್ತವ್ಯ ಹೂಡಿದ್ದವು. ಇಂದು ಅರಣ್ಯ ಭವನದಿಂದ ಅಂಬಾವಿಲಾಸ ಅರಮನೆಗೆ ದಸರಾ ಗಜಪಡೆ ತೆರಳಿದೆ. ಅರಣ್ಯ ಭವನದಿಂದ ಹೊರಟ ದಸರಾ ಗಜಪಡೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು. ಅಭಿಮನ್ಯು, ಲಕ್ಷ್ಮಿ, ರೋಹಿತ್, ಗೋಪಿ, ಏಕಲವ್ಯ, ಲಕ್ಷ್ಮಿ, ಭೀಮ, ಕಂಜನ್, ಧನಂಜಯ ಆನೆಗಳನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ಸಲ್ಲಿಸಿದ ಅಧಿಕಾರಿಗಳು, ಗಜಪಡೆಗೆ ಕಬ್ಬು, ಬೆಲ್ಲ, ವಿವಿಧ ಬಗೆಯ ಹಣ್ಣುಗಳು, ಸಿಹಿ ತಿನಿಸುಗಳು ನೀಡಿದರು. ಬಳಿಕ ಕ್ಯಾಪ್ಟನ್ ಅಭಿಮನ್ಯು ಮುಂದಾಳತ್ವದಲ್ಲಿ ಅರಮನೆಯತ್ತ ಹೆಜ್ಜೆ ಹಾಕಿತು.
ರಾಜಗಾಂಭಿರ್ಯದಲ್ಲಿ ಬಲ್ಲಾಳ್ ವೃತ್ತ, ಆರ್ ಟಿ ಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜಜೋಡಿ ರಸ್ತೆ ಮಾರ್ಗವಾಗಿ ಅರಮನೆಯತ್ತ ಹೆಜ್ಜೆ ಹಾಕಿ ಅರಮನೆ ತಲುಪಿತು. ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ ಗಜಪಡೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನ ಮಾಡಲಾಗಿತ್ತು. ಈ ವೇಳೆ ಜನರು ಆನೆಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡು ಸಂತಸಪಟ್ಟರು.
ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಮೈಸೂರು ಅರಮನೆ ಆವರಣಕ್ಕೆ ಪ್ರವೇಶ ಮಾಡುತ್ತಿಂದತೆಯೇ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ 10:10 ರಿಂದ 10:30 ರ ಶುಭಗಳಿಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ನೀಡಿದರು. ಚಾಮುಂಡಿ ಬೆಟ್ಟದ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಿದ ನಂತರ ದಸರಾ ಗಜಪಡೆ ಅರಮನೆ ಆವರಣ ಪ್ರವೇಶಿಸಿದೆ.
ಈ ಸಂದರ್ಭದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಕೃಷ್ಣ ರಾಜ ವಿಧಾನಸಭಾ ಶಾಸಕ ಶ್ರೀವತ್ಸಾ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಎಂ.ಕೆ.ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.