ಪ್ರತಿನಿಧಿ ವರದಿ ಕೆ.ಆರ್.ನಗರ
ಬಾಲ್ಯದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಶಾಲಾ ಹಂತದ ಕ್ರೀಡಾಕೂಟ ಸಹಕಾರಿಯಾಗಿದ್ದು, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪತ್ತೆಹಚ್ಚಿ ಮುನ್ನೆಲೆಗೆ ತರುವಲ್ಲಿ ಹೋಬಳಿ ಮಟ್ಟದ ಕ್ರೀಡೆಗಳು ಸಹಕಾರಿಯಾಲಿವೆ ಎಂದು ಬಿಇಒ ಆರ್.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಭೇರ್ಯ ಗ್ರಾಮದ ಪ್ಯಾರಡೇಸ್ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬುಧವಾರ ಆಯೋಜಿಸಿದ್ದ ಹೊಸ ಅಗ್ರಹಾರ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಂತ-ಹಂತವಾಗಿ ಯಶ್ವಸಿಗೊಳ್ಳಬೇಕೆಂಬ ದೃಷ್ಟಿಯಿಂದ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಅಯೋಜನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಕ್ರೀಡೆಯಲ್ಲಿನ ಸೋಲು, ಗೆಲುವನ್ನು ಗಂಭೀರವಾಗಿ ಪರಿಗಣಿಸದೆ ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ ಇದನ್ನು ಮನಗಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಶಿಕ್ಷಣ ಇಲಾಖೆ ಹೆಚ್ಚಿನ ಕ್ರಮ ವಹಿಸಿದೆ. ಶಾಲಾಗಳಲ್ಲಿ ಶಿಕ್ಷಕರೂಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಪೋಷಕರು ಸಹ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಕೀರ್ತಿ ತರಬೇಕೆಂದು ಕಿವಿಮಾತು ನುಡಿದರು.
ಈ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ 17 ಶಾಲೆಗಳಿಂದ 350 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ಅಥ್ಲೆಟಿಕ್ಸ್ ಮತ್ತು ಗೇಮ್ಸ್ ಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಟವಾಡುತ್ತಿದ್ದಾರೆ, ಭೇರ್ಯ ಗ್ರಾಮದ ಪ್ಯಾರಡೈಸ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಇದರ ಪ್ರಾಯೋಜಿಕತ್ವ ಪಡೆದುಕೊಂಡು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಇಲಾಖೆ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ.ಕುಮಾರಸ್ವಾಮಿ, ಪ್ಯಾರಡೈಸ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ತಜ್ ಮುಲ್ ಅಹಮದ್, ದೈಹಿಕ ಶಿಕ್ಷಕರಾದ ಬೀರೇಶ್, ಗೋವಿಂದರಾಜು, ಎಚ್.ಟಿ.ಮಂಜು, ರಾಜು, ಬಿ.ಆರ್.ಮಂಜುನಾಥ, ಪುಷಪಲತಾ, ಚಂದ್ರೇಗೌಡ, ಕೃಷ್ಣೇಗೌಡ, ಪ್ಯಾರಡೈಸ್ ಶಾಲೆಯ ಶಿಕ್ಷಕರಾದ ಧನಂಜಯ, ರಾಜೇಶ್ವರಿ, ಸಲ್ಮಾಸಿದ್ದಿಕ್, ಛಾಯಾಮಣಿ, ಪರೀಹಿನ್ ತಾಜ್, ಸೀಮಾಭಾನು, ಕೆ.ಎಸ್.ಸರಿತಾ, ಶೃತಿ ಇದ್ದರು.