ಚಾ.ನಗರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ್ ಸಲಹೆ
ಪ್ರತಿನಿಧಿ ವರದಿ ಚಾಮರಾಜನಗರ
ವಿದ್ಯಾರ್ಥಿಗಳು ಕೇವಲ ಪದವಿ ಶಿಕ್ಷಣ ಪಡೆದರೆ ಸಾಲದು, ಪದವಿ ನಂತರ ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕಾಗಿ ಕೌಶಲ್ಯಾಭಿವೃದ್ದಿ ತರಬೇತಿ ಪಡೆಯುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ್ ಸಲಹೆ ನೀಡಿದರು.
ನಗರದ ಜೆಎಸ್ಎಸ್ ಮಹಿಳಾಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ’ ದೀಕ್ಷಾರಂಭ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗಡಿ ಜಿಲ್ಲೆಯಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳ ಬಾಗಿಲು ತೆರೆದಿದೆ. ಸುತ್ತೂರು ಶ್ರೀಗಳು ತ್ರಿವಿಧ ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇಂತಹ ಸುಂದರ ಶೈಕ್ಷಣಿಕ ವಾತಾವರಣದಲ್ಲಿ ಓದುವುದೇ ವಿದ್ಯಾರ್ಥಿಗಳ ಪುಣ್ಯ ಎಂದು ಪ್ರಶಂಸಿಸಿದರು.
ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಾಮರಾಜನಗರ ವಿಶ್ವವಿದ್ಯಾನಿಲಯ ಚಿಂತನೆ ನಡೆಸಿದೆ. ವಿವಿ ವ್ಯಾಪ್ತಿಯ ಎಲ್ಲ ಕಾಲೇಜಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಕಾರ್ಯಕ್ರಮ ನಡೆಸಲಾಗುವುದು.ತಾವು ಅಂದುಕೊಳ್ಳುವ ಗುರಿಯನ್ನು ಮುಟ್ಟಲು ವಿದ್ಯಾರ್ಥಿಗಳು ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು, ದೂರದೃಷ್ಟಿ ಹೊಂದಬೇಕು ಎಂದರು.
ಜೆಎಸ್ಎಸ್ ಗುರುಪರಂಪರೆ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ’ ಸುತ್ತೂರು ಮಠದ 23ನೇ ಜಗದ್ಗುರು ಶಿವರಾತ್ರಿರಾಜೇಂದ್ರಶ್ರೀಗಳ ಶಿಕ್ಷಣದ ಪರಿಕಲ್ಪನೆಯನ್ನು ಈಗಿನ ಶ್ರೀಗಳು ಸಾಕಾರಗೊಳಿಸಿದ್ದಾರೆ. ಸುತ್ತೂರುಮಠದ ಹಿರಿಮೆಗರಿಮೆಯನ್ನು ದೇಶದಲ್ಲದೇ ವಿದೇಶದಲ್ಲು ಪ್ರಸಿದ್ದಿಯಾಗುವಂತೆ ಮಾಡಿದ್ದಾರೆ. ಕಾಲೇಜಿನಲ್ಲಿ ಪ್ರಥಮವರ್ಷದ ಪದವಿವಿದ್ಯಾರ್ಥಿಗಳನ್ನು ಸ್ವಾಗತಿಸುವ’ ದೀಕ್ಷಾರಂಭ ಕಾರ್ಯಕ್ರಮ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುವ ದಿಕ್ಸೂಚಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಎಸ್.ಅರುಣಾಶ್ರೀ’ ಹೊಸದಾಗಿ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿವಿಧ ವಿಭಾಗಗಳ ಜತೆ ಆಯಾವಿಷಯ ಅಧ್ಯಾಪಕರನ್ನು ಪರಿಚಯಿಸುವುದು, ಕಾಲೇಜಿನಲ್ಲಿ ವರ್ಷವಿಡಿ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ದೀಕ್ಷಾರಂಭ ಕಾರ್ಯಕ್ರಮದ ಉದ್ದೇಶ, ಇದು ಮೂರುದಿನಗಳ ಕಾಲ ನಡೆಯಲಿದೆ ಎಂದರು.
ಪ್ರಾಂಶುಪಾಲ ಎನ್.ಮಹದೇವಸ್ವಾಮಿ,
ಜೆಎಸ್ಎಸ್ ಬಿಇಡಿ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ಬಸವಣ್ಣ, ಜೆಎಸ್ಎಸ್ ಅಕ್ಷರದಾಸೋಹ ಸಮಿತಿ ಅಧ್ಯಕ್ಷ ಉಡಿಗಾಲಕುಮಾರಸ್ವಾಮಿ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿನಿಯರು ಇದ್ದರು.