ಪ್ರತಿನಿಧಿ ವರದಿ ಗುಂಡ್ಲುಪೇಟೆ
ಕರ್ನಾಟಕ ರಾಜ್ಯ ರೈತ ಸಂಘದ ಗುಂಡ್ಲುಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಶಿವಪುರ ಗ್ರಾಮದ ಭರತ್ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯ್ಕೆ ಮಾಡಲಾಯಿತು.
ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹಾಗೂ ರಾಜ್ಯ ಯುವ ಘಟಕದ ಸಂಚಾಲಕ ಯಶವಂತ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಶಿವಪುರ ಭರತ್, ಉಪಾಧ್ಯಕ್ಷ ಮಳವಳ್ಳಿ ಮಹೇಶ್ ಮತ್ತು ಕೋಡಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ರಘು ಮಲ್ಲಯ್ಯನಪುರ, ಸಹಕಾರ್ಯದಶಿ ಗಿರೀಶ್ ಪಡಗೂರು, ಸಂಘಟನಾ ಕಾರ್ಯದರ್ಶಿ ರೇವಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಜತೆಗೆ ಕಸಬಾ ಹೋಬಳಿ ಅಧ್ಯಕ್ಷರಾಗಿ ಪ್ರವೀಣ್, ಹಂಗಳ ಹೋಬಳಿ ಅಧ್ಯಕ್ಷ ಮನು, ಬೇಗೂರು ಹೋಬಳಿ ಅಧ್ಯಕ್ಷ ಸೃಜನ್, ತೆರಕಣಾಂಬಿ ಹೋಬಳಿ ಅಧ್ಯಕ್ಷರಾಗಿ ಮಂಜು ಆಯ್ಕೆಯಾದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರೈತ ಸಂಘಟನೆಯಲ್ಲಿ ಯುವಕರ ಹೆಚ್ಚಾಗಬೇಕು, ಕೃಷಿಗೆ ಮೊದಲ ಆದ್ಯತೆ ನೀಡುವಂತೆ ಯುವಕರಲ್ಲಿ ಸಹಭಾಗಿತ್ವ ಬರಬೇಕು, ಹಾಗೂ ಇತ್ತೀಚಿನ ದಿನಗಳಲ್ಲಿ ಯುವಕರೇ ಕೃಷಿಯ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು ಅವರ ರೈತ ಬದುಕಿಗೆ ಬದ್ಧತೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಯುವಕರನ್ನು ಸಂಘಟನೆ ಮಾಡುವ ದೃಷ್ಟಿಯಿಂದ ರೈತ ಯುವ ಘಟಕವನ್ನು ಸ್ಥಾಪಿಸಲಾಗಿದೆ. ಯುವಕರು ಮುಂಬರುವ ದಿನಗಳಲ್ಲಿ ರೈತ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೋರಾಟದ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಪ್ರತಿಯೊಬ್ಬ ರೈತರ ನೆರವಿಗೆ ಸದಾ ಸೈನಿಕರಂತೆ ಇರಬೇಕು ಎಂದು ಸಲಹೆ ನೀಡಿದರು.
ಯುವ ಘಟಕದ ರಾಜ್ಯ ಸಂಚಾಲಕ ಟಿ.ನರಸೀಪುರ ಚಂದ್ರು, ತಾಲೂಕು ರೈತ ಸಂಘದ ಅಧ್ಯಕ್ಷ ದಿಲೀಪ್, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಇತರರಿದ್ದರು ಹಾಜರಿದ್ದರು.