ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅಳಲೂ । ಸಮಸ್ಯೆಗಳ ಸರಮಾಲೆ
ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟವನ್ನು ನಿರ್ಮೂಲನೆ ಮಾಡುವ ಜತೆಗೆ ಎಸ್ಸಿ, ಎಸ್ಟಿ ಸಮುದಾಯಗಳ ಮೇಲೆ ನೆಡೆಯವ ದೌರ್ಜನ್ಯವನ್ನು ತಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಬಿ.ಕವಿತಾ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸಿ,ಎಸ್ಟಿ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಹುಡುಕುವ ಸಲುವಾಗಿ ಪ್ರತಿ ತಿಂಗಳ ನಾಲ್ಕನೇ ವಾರದಲ್ಲಿ ಎಸ್ಸಿ, ಎಸ್ಟಿ ಕುಂದು ಕೊರತೆಯನ್ನು ಕರೆಯುವ ಉದ್ದೇಶವನ್ನು ಹೊಂದಲಾಗಿದೆ. ಪೊಲೀಸ್ ವ್ಯವಸ್ಥೆ ಸದಾ ನಿಮ್ಮ ಜತೆ ಇರಲಿದೆ. ಈ ನಿಟ್ಟಿನಲ್ಲಿ ಕುಂದು ಕೊರತೆ ಸಭೆಯನ್ನು ಕರೆಯಲಾಗಿದೆ ಎಂದರು.
ದಲಿತ ಮುಖಂಡರು ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದ ಒಳಗೆ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಲು ಜಿಲ್ಲಾಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಅವಕಾಶ ನೀಡುವುದಿಲ್ಲ. ಆದರೆ ಇತರೆ ಸಮುದಾಯದವರು, ರೈತಸಂಘ ಹಾಗೂ ರಾಜಕೀಯ ನಾಯಕರು ಪ್ರತಿಭಟನೆ ಮಾಡಿದರೆ ಅವರನ್ನು ತಡೆಯುವುದಿಲ್ಲ. ಹೀಗಾಗಿ ಜಿಲ್ಲಾಡಳಿತ ಭವನದ ಆವರಣದೊಳಗೆ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿಭಟನೆಗೆ ಒಂದು ಸ್ಥಳವನ್ನು ನಿಗದಿ ಮಾಡಿದರೆ ಎಲ್ಲ ಸಂಘಟನೆಯವರು ಅದೇ ಸ್ಥಳದಲ್ಲಿ ಕುಳಿತು ಪ್ರತಿಭಟನೆ ಮಾಡಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದರು.
ದಲಿತ ಮುಖಂಡ ಆರ್.ಮಹದೇವ್ ಮಾತನಾಡಿ, ಹೊಂಗನೂರಿನಲ್ಲಿ ನಡೆದ ಅಂಬೇಡ್ಕರ್ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನರ ನಡುವೆ ಗಲಾಟೆ ಸಂಭವಿಸಿತ್ತು. ಹೀಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಗ್ರಾಮದಲ್ಲಿ ಎರಡು ಸಮುದಾಯಗಳನ್ನು ಒಂದು ಕಡೆ ಸೇರಿಸಿ ಶಾಂತಿಸಭೆ ನಡೆಸಿ, ಅವರನ್ನು ಸಾಮರಸ್ಯದಿಂದ ಬದುಕುವಂತೆ ಅವಕಾಶ ಮಾಡಿಕೊಡಬೇಕು. ಹಿಂದಿನ ದಿನಗಳಲ್ಲಿ ಪ್ರತಿ ತಾಲೂಕು, ಗ್ರಾಮಗಳಲ್ಲಿ ಗ್ರಾಮಗಸ್ತು ಸಭೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದು ಸಮರ್ಪಕವಾಗಿ ಆಗಬೇಕು. ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯವರ ಮೇಲೆ ಎಷ್ಟು ದೌರ್ಜನ್ಯ ಪ್ರಕರಣಗಳಾಗಿವೆ. ಅಂತರಜಾತಿ ವಿವಾಹಗಳಿಗೆ ಎಷ್ಟು ಪರಿಹಾರ ಮತ್ತು ಅವರ ವಿರುದ್ಧ ಎಷ್ಟು ದೌರ್ಜನ್ಯವಾಗಿದೆ ಎನ್ನುವ ಬಗೆ ಮಾಹಿತಿ ಅಗತ್ಯವಾಗಿದೆ ಎಂದು ತಿಳಿಸಿದರು. ಎಸ್ಪಿ ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಸದ್ಯದಲ್ಲೇ ಹೊಂಗನೂರು ಗ್ರಾಮದಲ್ಲಿ ಶಾಂತಿಸಭೆಯನ್ನು ಕರೆದು ಎರಡು ಸಮುದಾಯಗಳಿಗೂ ಸೌಹಾರ್ದಯುತವಾಗಿ ಬದುಕುವಂತೆ ಮಾರ್ಗದರ್ಶನ ಮಾಡಲಾಗುವುದು ಎಂದು ತಿಳಿಸಿದರು.
ಮಲೆ ಮಹದೇಶ್ವರಬೆಟ್ಟದಲ್ಲಿ ಬಸಮ್ಮ ಎಂಬುವರಿಗೆ ತಿರುಗಾಡಲು 10 ಅಡಿ ಅಗಲ, 100 ಮೀಟರ್ ಉದ್ದದ ರಸ್ತೆ ಇದ್ದ ಜಾಗವನ್ನು ಅರಣ್ಯ ಇಲಾಖೆಯವರು ಆನೆ ಕಾರಿಡಾರ್ ಮಾಡಲು ಗುಂಡಿ ತೋಡಿದ್ದಾರೆ. ಇದರಿಂದ ಓಡಾಡಲು ಜಾಗವಿಲ್ಲದೆ ಬಸಮ್ಮ ಅವರು ಪರದಾಡುವಂತಾಗಿದೆ. ಹೀಗಾಗಿ ಜಿಲ್ಲಾ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಸೂಕ್ತ ನಿರ್ಧಾರ ತೆಗೆದುಕೊಂಡು ಶಾಶ್ವತವಾಗಿ ತಿರುಗಾಡಲು ರಸ್ತೆ ಬಿಡಿಸಿ ಕೊಡುವಂತೆ ಆಗ್ರಹಿಸಿದ್ದರು.
ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಹೂಗ್ಯಂ, ಜಕ್ಕಹಳ್ಳಿ ಮತ್ತು ರಾಮಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಸಿಯೂಟ ತಯಾರಕರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ತಯಾರು ಮಾಡುವ ಬಿಸಿಯೂಟವನ್ನು ಮಕ್ಕಳುಗಳು ಸೇವನೆ ಮಾಡುವುದಿಲ್ಲ. ಅಲ್ಲದೆ ಈ ಗ್ರಾಮಗಳಲ್ಲಿರುವ ಬಾರ್ ಗಳಲ್ಲಿಯೂ ಸಹ ದಲಿತರಿಗೆ ಪ್ರತ್ಯೇಕ ಲೋಟವನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ದೊಡ್ಡಿಂದುವಾಡಿ ಗ್ರಾಮದ ಕೆ ಸಿದ್ದರಾಜು ಆಗ್ರಹಿಸಿದ್ದರು.
ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ ಮಾತನಾಡಿ, ಪೊಲೀಸ್ ಇಲಾಖೆಯಿಂದ ನಡೆಸುವ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಗೆ ಎಸ್ಟಿ ಸಮುದಾಯದ ಮುಖಂಡರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಅವರು ಸಭೆಗೆ ಬರಲು ಸಾಧ್ಯವಾಗುವುದಿಲ್ಲ. ಸಮುದಾಯದ ಮುಖಂಡರಿಗೂ ಸಭೆ ಇರುವ ಮೂರು ದಿನ ಮುಂಚೆಯೇ ಮಾಹಿತಿ ನೀಡಿದರೆ ಅವರು ಸಭೆಗೆ ಹಾಜರಾಗಲಿದ್ದಾರೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಅಬಕಾರಿ ಕಾಯ್ದೆಯಡಿ ಒಟ್ಟು 186 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಬಾರ್ ಮಾಲೀಕರ ವಿರುದ್ಧ ಮಹದೇಶ್ವರಬೆಟ್ಟ, ಬೇಗೂರು ಮತ್ತು ತೆರಕಣಾಂಬಿ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಸರಸ್ವತಿ, ಲಕ್ಷ್ಮಿ, ಗಣೇಶನ ಫೋಟೋಗಳು ಮಾತ್ರ ಇಲಿವೆ. ಆದರೆ ರಾಷ್ಟ್ರ ನಾಯಕರ ಫೋಟೋಗಳು ಇರುವುದಿಲ್ಲ ಎನ್ನುವ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಿಗೂ ಸಂವಿಧಾನ ಪೀಠಿಕೆಯ ಕುರಿತ ಫೋಟೊವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಪೊಲೀಸ್ ಠಾಣೆಗೆ ಮತ್ತು ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸುವಂತೆ ಸೂಕ್ತ ತಿಳುವಳಿಕೆ ಮತ್ತು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಸ್ಟಿ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮುಖಂಡರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಅವರಿಗೆ ತಿಳಿಸುತ್ತೇವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಧರ್ಮೇಂದ್ರ ಸೇರಿದಂತೆ ಎಸ್ಸಿ,ಎಸ್ಟಿ ಸಮುದಾಯದ ಮುಖಂಡರು ಇದ್ದರು.
—————————————-
ಬಾಕ್ಸ್…
ಕೊಳತ್ತೂರು ಮಣಿಯಿಂದ ನಮಗೆ ಬೆದರಿಕೆ
ಮಲೆ ಮಹದೇಶ್ವರಬೆಟ್ಟದ ಶಂಕರ ನಾಯಕ ಮತ್ತು ರತ್ನಬಾಯಿ ದಂಪತಿ ಮಾತನಾಡಿ, ನಾವು 25 ವರ್ಷಗಳಿಂದಲೂ ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ಆದರೆ ಈ ಜಾಗ ನನ್ನದು ಎಂದು ಕೊಳತ್ತೂರು ಮಣಿ ಎನ್ನುವ ವ್ಯಕ್ತಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ಧಾರೆ. ಅಲ್ಲದೆ ನಾವು ವಾಸವಿರುವ ಮನೆಯನ್ನು ಹೊಡೆದು ಹಾಕಲು ಮುಂದಾಗಿದ್ದಾರೆ. ಈ ಮನೆಯನ್ನು ಬಿಟ್ಟರೆ ನಮಗೆ ಬದುಕಲು ನೆಲೆಇಲ್ಲ ಎಂದು ದಂಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕಣ್ಣೀರು ಹಾಕಿ ಅಳಲು ತೋಡಿಕೊಂಡರು. ಕೊಳತ್ತೂರು ಮಣಿ ಎಂಬವರು 2020ರಲ್ಲಿ ಆರು ಸೆಂಟ್ ಜಾಗವನ್ನು ತೆಗೆದುಕೊಂಡು ಒಂದು ಮನೆಯನ್ನು ಕಟ್ಟಿಕೊಂಡಿದಿದ್ದಾರೆ. ನಾವು 25 ವರ್ಷಗಳಿಂದಲೂ ಅಲ್ಲಿ ವಾಸವಾಗಿದ್ದೇವೆ. ಆದರೆ ಈ ಜಾಗ ನನಗೆ ಸೇರಬೇಕು ಎಂದು ಮಣಿ ನಮ್ಮ ವಿರುದ್ಧ ಇಲ್ಲ ಸಲ್ಲದ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಸಹ ಕೊಳತ್ತೂರು ಮಣಿ, ಇವರ ಮಗ ಹಾಗೂ ಇವರ ಸಹಪಾಟಿಗಳು ಆಗಾಗ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅವರಿಂದ ನಮಗೆ ಭಯವಿದೆ. ನಾವು ನಮ್ಮ ಮನೆಯಲ್ಲಿ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದೇವೆ. ಈ ಕ್ಯಾಮರದಲ್ಲಿ ಅವರು ನಮ್ಮ ಮೇಲೆ ನಡೆಸಿರುವ ದೌರ್ಜನಗಳನ್ನು ಸೆರೆಯಾಗಿವೆ. ಇದನ್ನು ತಮ್ಮ ಬಳಿ ತಂದುಕೊಡುತ್ತೇವೆ ನಮಗೆ ನ್ಯಾಯಾಕೊಡಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಕೊಳತ್ತೂರು ಮಣಿ ತಮ್ಮ ಮೇಲೆ ದೌರ್ಜನ್ಯ ನಡೆಸಿರುವ ಕುರಿತು ಇಲಾಖೆಗೆ ಸಿಸಿಟಿವಿ ದೃಶ್ಯಗಳನ್ನು ನೀಡುವ ಜತೆಗೆ ಅವರ ವಿರುದ್ಧ ದೂರು ನೀಡಿ. ಪ್ರಕರಣ ದಾಖಲಿಸಿ ನಾವು ಅವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದ ಅವರು, ನ್ಯಾಯಾಲಯದ ತೀರ್ಪು ಬರುವವರೆಗೆ ಕೊಳತ್ತೂರುಮಣಿ ಶಂಕರನಾಯಕ ಮತ್ತು ರತ್ನಬಾಯಿ ದಂಪತಿಗೆ ಕಿರುಕುಳ ನೀಡಿದಂತೆ ಕ್ರಮವಹಿಸುವಂತೆ ಮಹದೇಶ್ವರಬೆಟ್ಟ ಠಾಣೆಯ ಪೊಲೀಸರಿಗೆ ಸೂಚಿಸಿದರು.
25ಸಿಎಚ್ಎನ್.2: ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಬಿ.ಕವಿತಾ ಅವರ ಅಧ್ಯಕ್ಷತೆಯಲ್ಲಿ ಎಸ್ಸಿ,ಎಸ್ಟಿ ಕುಂದುಕೊರತೆ ಸಭೆ ನಡೆಯಿತು.
25ಸಿಎಚ್ಎನ್.2ಬಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಸಿ,ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಹದೇಶ್ವರಬೆಟ್ಟದ ಶಂಕರ ನಾಯಕ ಅಳಲು ತೋಡಿಕೊಂಡರು.