ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಪರಪ್ಪನ ಅಗ್ರ ಹಾರದ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವುದನ್ನು ಬಿಂಬಿಸುವ ಫೋಟೋ ಮತ್ತು ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು, ಚೇರ್ ಮೇಲೆ ಆರಾಮವಾಗಿ ಕುಳಿತು ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳಸೀನ ಹಾಗೂ ಸಹ ಆರೋಪಿಯಾದ ಆಪ್ತ ನಾಗರಾಜ್ ಜತೆಗೆ ಬಿಂದಾಸ್ ಆಗಿ ಹರಟೆ ಹೊಡೆಯುತ್ತಿರುವ ಫೋಟೋ ಬಹಿರಂಗವಾಗಿದೆ. ಅದರ ಬೆನ್ನಲ್ಲೇ, ವಿಡಿಯೋ ಕರೆಯಲ್ಲಿ ವ್ಯಕ್ತಿಯೊಬ್ಬನ ಜತೆಗೆ ದರ್ಶನ್ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಯಮದ ಪ್ರಕಾರ ಜೈಲಿನಲ್ಲಿ ಯಾವುದೇ ಸಿಗರೇಟ್, ಮಾದಕ ವಸ್ತಗಳಿಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ಅಡಿಕ್ಟ್ ಆಗಿದ್ದರೆ, ವೈದ್ಯರ ಮಾಹಿತಿಯ ಮೇರೆಗೆ ಮಾತ್ರ ಸಿಗರೇಟ್ಗೆ ಅವಕಾಶವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದೀಗ ನಟ ದರ್ಶನ್ ನಿಯಮ ಮೀರಿ ಅದರಲ್ಲೂ ರೌಡಿ ವಿಲ್ಸನ್ ಗಾರ್ಡನ್ ಜೊತೆ ಕುಳಿತು ಯಾವುದೇ ಭಯವಿಲ್ಲದೆ ಸಿಗರೇಟ್ ಹಿಡಿದಿರುವ ಫೋಟೋ ಭಾರೀ ವೈರಲ್ ಆಗುತ್ತಿದೆ.
ಇನ್ನೂ ಈ ಫೋಟೋ ಹೇಗೆ ಹೊರಗಡೆ ಬಂತು ಎನ್ನುವ ಕೂತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ವೇಲು ಎಂಬ ಖೈದಿ ಈ ಫೋಟೋವನ್ನು ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಕಳುಹಿಸಿದ್ದು, ಇದೀಗ ಇದು ಭಾರೀ ವೈರಲ್ ಆಗುತ್ತಿದೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ಜೈಲಿನಲ್ಲಿ ನಿಯಮಗಳನ್ನು ಮೀರಿ ಕೈದಿಗಳಿಗೆ ಮದ್ಯ, ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ ಆರೋಪ ಕೇಳಿಬಂದಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ.
ಮತ್ತೊಂದೆಡೆ ಕೈದಿ ಕೈಗೆ ಮೊಬೈಲ್ ಕೊಟ್ಟಿದ್ದು ಯಾರು ಎನ್ನುವ ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ. ಇದನ್ನೆಲ್ಲ ಗಮನಿಸಿದರೆ, ಪರಪ್ಪನ ಅಗ್ರಹಾರದಲ್ಲಿ ಕೊಲೆ ಮಾಡಿದ ಆರೋಪಿಗಳಿಗೆ ಇಷ್ಟೊಂದು ರಾಜತಿಥ್ಯಾ ಯಾಕೆ ಎನ್ನುವ ಪ್ರಶ್ನೆಗಳು ಕೂಡ ಎದ್ದಿದೆ.