ಮೈಸೂರು: ನಗರದ ಬನ್ನೂರು ರಸ್ತೆಯ ಹೊಸ ಜಿಲ್ಲಾಧಿಕಾರಿ ಕಛೇರಿ ಪಕ್ಕದಲ್ಲಿ ಸದ್ದಿಲ್ಲದೇ ನಿರ್ಮಾಣ ವಾಗುತ್ತಿದೆ ಗಾಂಧಿಭವನ. ಶೇ 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಮೂರ್ನಾಕು ತಿಂಗಳಲ್ಲಿ ಗಾಂಧಿಭವನ ಉದ್ಘಾಟನೆಗೆ ಸಿದ್ದವಾಗಲಿದೆ. 1 ಎಕರೆ ವಿಶಾಲವಾದ ಪ್ರದೇಶದಲ್ಲಿ ಗಾಂಧಿಭವನ ತಲೆಎತ್ತುತಿದ್ದು 100*100 ಅಳತೆಯ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಕಟ್ಟಡದಲ್ಲಿ ಗ್ರಂಥಾಲಯ, ವಾಚನಾಲಯ,ವಿವಿದೋದ್ದೇಶ ಸಭಾಂಗಣ, ತರಬೇತಿ ಕೇಂದ್ರ, ಗಾಂಧಿಯವರ ಜೀವನದ ವಿವಿಧ ಹಂತಗಳ ಪೋಟೋ ಗ್ಯಾಲರಿ, 100 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಛೇರಿ ಕೋಣೆ ಸೇರಿದಂತೆ, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಇರುವ ಬೃಹತ್ ಗಾಂಧಿಭವನ ಸಾಂಸ್ಕೃತಿಕ ನಗರಿಯಲ್ಲಿ ತಲೆಎತ್ತಲಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಅಂದರೆ 2016- 17 ರ ಆಯವ್ಯದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ , ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಇಲಾಖೆಯ ಮಖಾಂತರ 3 ಕೋಟಿ ರೂ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವನ್ನ ಘೋಷಿಸಿದ್ದರು. ಮಹಾತ್ಮ ಗಾಂಧಿಯವರ ಚಿಂತನೆಗಳು, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳೊಂದಿಗೆ, ಗಾಂಧಿಯವರ ಸರಳ ಜೀವನ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು ಮಹಿಳೆಯರು, ದಲಿತ, ಹಿಂದುಳಿದವರ ಬಗೆಗೆ ಅವರಿಗಿದ್ದ ಕಾಳಜಿ, ತುಡಿತಗಳ ಅನಾವರಣ ಗಾಂಧಿ ಭವನದಲ್ಲಿ ಆಗಲಿದೆ.
ಅದರಂತೆ ಗಾಂಧಿ ಭವನದಲ್ಲಿ ವರ್ಷಪೂರ್ತಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲು ಉದ್ದೇಶಿಸಲಾಗಿರುತ್ತದೆ. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಿ ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.ಕಟ್ಟಡದ ಮುಂಭಾಗದ ಅಂಗಳದಲ್ಲಿ ಹುಲ್ಲುಹಾಸಿನ ನಡುವೆ ಗಾಂಧಿಯವರ ವಿವಿಧ ಕಲಾಕೃತಿಗಳು, ಸ್ವಾತಂತ್ರ್ಯ ಸಂಗ್ರಾಮದ ಪೋಟೋಗಳು, ದೆಹಲಿಯ ಪಾರ್ಲಿಮೆಂಟ್ ಮುಂಭಾಗದಲ್ಲಿರುವ ಗ್ಯಾರಾ ಮೂರ್ತಿ ಆಕೃತಿ ತಲೆ ಎತ್ತಲಿದೆ.ಜಿಲ್ಲಾಮಟ್ಟದಲ್ಲಿ ಗಾಂಧಿ ಭವನ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಸಮಿತಿಯಿದ್ದು, ಜಿಲ್ಲಾ ಪಂಚಾಯತ್ ಸಿಇಒ, ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರಿದ್ದು ಜಿಲ್ಲಾ ವಾರ್ತಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಒಟ್ಟಾರೆಯಾಗಿ ಗಾಂಧಿ ಭವನ ಗಾಂಧಿ ಪ್ರಿಯರು, ಗಾಂಧಿವಾದಿಗಳು, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಗಾಂಧಿಯವರನ್ನ ಅರಿಯುವ ಹಾಗೂ ಪಿಕ್ನಿಕ್ ಪ್ರಿಯರಿಗೆ ಒಂದರ್ಧ ದಿನ ಕಳೆಯಲು ಒಂದು ಉತ್ತಮ ತಾಣವಾಗಲಿದೆ.