ನಾಮಪತ್ರ ಹಿಂಪಡೆದ ಬಿ.ಎಂ.ಮುಬಾರಕ್ । ಪತ್ರಕರ್ತರನ್ನೂ ಬ್ಯಾರಿಕೇಡ್ನಿಂದ ಹೊರಗಿಟ್ಟ ಪೊಲೀಸರು
೩೬ ಮಂದಿ ಮತದಾರರು ಹಾಜರು
ಸಂಸದ ಸೇರಿದಂತೆ ಇಬ್ಬರು ಸದಸ್ಯರು ಗೈರು
ಪ್ರತಿನಿಧಿ ವರದಿ ಕೋಲಾರ
ತೀವ್ರ ಕುತೂಹಲವಾಗಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಮಂಗಳವಾರ ನಡೆದಿದ್ದು, ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಸಂಗೀತಾ ಜಗದೀಶ್ ಅವಿರೋಧವಾಗಿ ಆಯ್ಕೆಯಾದರು.
ಬೆಳಗ್ಗೆ ೯ ರಿಂದ ೧೧ ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀದೇವಮ್ಮ ಹಾಗೂ ಬಿ.ಎಂ.ಮುಬಾರಕ್ ಅಧ್ಯಕ್ಷ ಸ್ಥಾನಕ್ಕೆ, ಸಂಗೀತಾ ಜಗದೀಶ್ ಹಾಗೂ ಅಪೂರ್ವ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಲ್ಕೂ ನಾಮಪತ್ರಗಳು ಅಂಗೀಕೃತಗೊಂಡವು.
ಮೊದಲಿಗೆ ಮಿನಿಬಸ್ನಲ್ಲಿ ಆಗಮಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಗರಸಭೆ ಕಚೇರಿಯತ್ತ ತೆರಳಿದರು. ಇದಾದ ಕೆಲವೇ ನಿಮಿಷಗಳಲ್ಲಿ ಬಿ.ಎಂ.ಮುಬಾರಕ್ ನೇತೃತ್ವದಲ್ಲಿ ಅವರ ಬೆಂಬಲಿತ ಸದಸ್ಯರು ಮತ್ತೊಂದು ಮಿನಿಬಸ್ನಲ್ಲಿ ಆಗಮಿಸಿದರು.
ನಗರಸಭೆಯಲ್ಲಿ ೩೫ ಮಂದಿ ಸದಸ್ಯರಿದ್ದು, ಸಂಸದ, ಶಾಸಕ, ಇಬ್ಬರು ಎಂಎಲ್ಸಿಗಳು ಸೇರಿ ೩೯ ಮಂದಿ ಮತದಾರರಿದ್ದರು. ಶಾಸಕ ಸಂಸದ ಎಂ.ಮಲ್ಲೇಶ್ಬಾಬು ಹಾಗೂ ಇಬ್ಬರು ಸದಸ್ಯರು ಗೈರಾಗಿದ್ದ ಕಾರಣ ೩೬ ಮಂದಿ ಒಟ್ಟು ಮತದಾರರು ಹಾಜರಿದ್ದರು.
ಕಾಂಗ್ರೆಸ್ನ ಶಾಸಕ ಕೊತ್ತೂರು ಮಂಜುನಾಥ್, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಸೀರ್ ಅಹಮದ್, ೨೦ ಸದಸ್ಯರು ಸೇರಿದಂತೆ ೨೨ ಮತದಾರರು ಕಾಂಗ್ರೆಸ್ ಪರವಾಗಿ ಇದ್ದರು.
ಇತ್ತ ಬಿ.ಎಂ.ಮುಬಾಕರ್ ಪರವಾಗಿ ಎಂಎಲ್ಸಿ ಇಂಚರ ಗೋವಿಂದರಾಜು ಹಾಗೂ ಸದಸ್ಯರು ಸೇರಿ ೧೪ ಮಂದಿ ಮಾತ್ರವೇ ಹಾಜರಿದ್ದರು. ಇದರಿಂದಾಗಿ ಎಚ್ಚೆತ್ತ ಬಿ.ಎಂ.ಮುಬಾರಕ್ ಚುನಾವಣೆ ಎದುರಿಸಲು ಸಾಧ್ಯವಾಗುವುದಿಲ್ಲ, ಮುಖಭಂಗವಾಗುತ್ತದೆ ಎನ್ನುವುದನ್ನು ಅರಿತು ತಮ್ಮ ನಾಮಪತ್ರ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದರು. ಹೀಗಾಗಿ ೨೭ನೇ ವಾರ್ಡಿನ ಲಕ್ಷ್ಮಿದೇವಮ್ಮ, ೧೫ನೇ ವಾರ್ಡಿನ ಸಂಗೀತಾ ಜಗದೀಶ್ ಅವಿರೋಧ ಆಯ್ಕೆಗೆ ಸಹಕಾರಿಯಾಯಿತು.
ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಡಾ.ಮೈತ್ರಿ ಚುನಾವಣೆ ಪ್ರಕ್ರಿಯೆ ಮುಗಿಸಿ ಫಲಿತಾಂಶ ಘೋಷಣೆ ಮಾಡಿದರು. ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಆಗಮಿಸಿ ವೀಕ್ಷಣೆ ನಡೆಸಿ ತೆರಳಿದರು.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಸುದ್ದಿಗಾಗಿ ತೆರಳಿದ ಪತ್ರಕರ್ತರನ್ನೂ ಬ್ಯಾರಿಕೇಡ್ನಿಂದ ಹೊರಗಿಟ್ಟು ಚುನಾವಣೆ ನಡೆಸಿದ್ದು ಅಸಮಧಾನಕ್ಕೆ ಕಾರಣವಾಯಿತು. ಫೋಟೋ, ವಿಡಿಯೋ ಮಾಡಿಕೊಳ್ಳುವುದಕ್ಕೂ ಪೊಲೀಸರು ಅಡ್ಡಿಪಡಿಸಿದರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಗಮನಕ್ಕೆ ವಿಚಾರ ತಂದರೂ ಪ್ರಕ್ರಿಯೆ ಮುಗಿಯುವವರೆಗೂ ಬರುವುದು ಬೇಡ ಎಂದರು. ಎಲ್ಲ ಮುಗಿದ ಮೇಲೆ ಗುರುತಿನ ಚೀಟಿ ಇದ್ದವರನ್ನು ಮಾತ್ರ ಬ್ಯಾರಿಕೇಡ್ನಿಂದ ಒಳಗೆ ಬಿಡಲಾಯಿತು.
ಅವಮಾನದ ಹಿನ್ನೇಲೆ ಕೋಲಾರದ ಚುನಾವಣೆ ಹೆಚ್ಚಿನ ಗಮನ: ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮುಳಬಾಗಲಿನಲ್ಲಿ ನಾವು ಗೆದ್ದಾಗ ಕೋಲಾರದಲ್ಲಾದರೂ ಕೊತ್ತೂರು ಮಂಜುಗೆ ಅವಮಾನ ಮಾಡಬೇಕೆಂದು ಕೆಲವರು ಚರ್ಚೆ ಮಾಡಿದ್ದರು, ಈ ಹಿನ್ನೆಲೆಯಲ್ಲಿ ನಾನು ಕೋಲಾರದ ಚುನಾವಣೆಯನ್ನು ಹೆಚ್ಚಿನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೆ. ಅಭಿವೃದ್ಧಿ ದೃಷ್ಠಿಯಿಂದ ಅವಿರೋಧ ಆಯ್ಕೆಗೆ ಎಲ್ಲ ಸದಸ್ಯರು ಸಹಕರಿಸಿರುವುದು ಸ್ವಾಗತಾರ್ಹ. ಕೋಲಾರವು ಅಭಿವೃದ್ಧಿಯಲ್ಲಿ ಹಿಂದೆ ಇದ್ದು, ಮುಂದಕ್ಕೆ ಬರುವಂತೆ ಮಾಡಲು ಎಲ್ಲರೂ ಪಣತೊಡುತ್ತೇವೆ ಎಂದರು.
ನೂತನ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ ಜಗದೀಶ್ ಮಾತನಾಡಿ, ನಮಗೆ ಸಿಕ್ಕಿರುವ ೧೩ ತಿಂಗಳ ಅವಧಿಯಲ್ಲಿ ಉತ್ತಮ ಹಾಗೂ ಮಾದರಿಯಾಗಿ ಕೆಲಸ ಮಾಡುತ್ತೇವೆ. ಅವಿರೋಧ ಆಯ್ಕೆಗೆ ಎಲ್ಲರ ಸಹಕಾರವೂ ಇದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಸಮುಕ್ತ ಸೇರಿದಂತೆ ಕೋಲಾರ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪಣ ತೊಡಲಾಗುವುದು ಎಂದು ಹೇಳಿದರು.
—————————
ಕಾಂಗ್ರೆಸ್ನ ೪ ಸದಸ್ಯರು ಬಿ.ಎಂ.ಮುಬಾರಕ್ ಜತೆಗಿದ್ದರು. ಮುಂದೆ ಪಕ್ಷದಿಂದ ಏನಾದರೂ ತೊಂದರೆ ಆಗಬಹುದು ಎನ್ನುವುದನ್ನು ಅರಿತು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಮುಬಾರಕ್ ಸಂಖ್ಯಾಬಲ ಕಡಿಮೆಯಿಂದ ನಾಮಪತ್ರ ವಾಪಸ್ ಪಡೆದ ಕಾರಣ ಅವಿರೋಧ ಆಯ್ಕೆಯಾಗಿದೆ. ನಾವು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆಗೆ ತೀರ್ಮಾನ ಮಾಡಿ ಒಗ್ಗಟ್ಟಾಗಿ ಘೋಷಣೆ ಮಾಡಿದ್ದೇವೆ. ಉತ್ತಮ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್,