ಬೆಂಗಳೂರು, ಆಗಸ್ಟ್ 28: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿ ಈಗಾಗಲೇ ಮೂರು ತಿಂಗಳು ಸಮೀಪಿಸುತ್ತಿದೆ. ಪತ್ನಿ ವಿಜಯಲಕ್ಷ್ಮೀ ಸೇರಿದಂತೆ ಕುಟುಂಬಸ್ಥರು ದರ್ಶನ್ ಬಿಡುಗಡೆಗಾಗಿ ಕಾನೂನು ಹೋರಾಟ ಸೇರಿದಂತೆ ದೇವಾಲಯಗಳ ಮೊರೆ ಹೋಗಿ ಹರಸಾಹಸ ಪಡುತ್ತಿದ್ದರೆ, ಅತ್ತ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಭಾನುವಾರ ಸಂಜೆ ಎಲ್ಲೆಡೆ ವೈರಲ್ ಆದ ಫೋಟೋ ಹಾಗೂ ವಿಡಿಯೋದಿಂದ ನಟ ದರ್ಶನ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೋ ಬೆನ್ನಲ್ಲೇ 9 ಅಧಿಕಾರಿಗಳನ್ನು ಗೃಹಮಂತ್ರಿಗಳು ಅಮಾನತು ಮಾಡಿದ್ದರು. ಇದೀಗ ನಟ ದರ್ಶನ್ ಸರತಿ, ಪೋಟೋ ಮತ್ತು ವೀಡಿಯೋ ಹಲವರ ಅಸಮಾಧನಕ್ಕೆ ಗುರಿಯಾಗಿತ್ತು, ನಟ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಪೋಲಿಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಸಮ್ಮತಿಸಿದೆ.
ನಟ ದರ್ಶನ್ ಮತ್ತು ಸಂಗಡಿಗರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಕೋರ್ಟಿನಿಂದ ಅನುಮತಿ ದೊರೆತ ಬೆನ್ನಲ್ಲೆ ಇಂದು ನಟ ದರ್ಶನ್ ಅಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರವಾಗ್ತಿದ್ದಾರೆ. ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿದೆ. A2 ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಸೇರುತ್ತಿದ್ದರೆ, A1 ಆರೋಪಿ ಪವಿತ್ರಾ ಗೌಡ, ಹಾಗೂ ಅನುಕುಮಾರ್ ,ದೀಪಕ್ರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಸಲಾಗುತ್ತದೆ. ರವಿ, ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಅವರು ಈಗಾಗಲೇ ತುಮಕೂರು ಜೈಲಿನಲ್ಲಿದ್ದಾರೆ. ಪವನ್, ರಾಘವೇಂದ್ರ ಹಾಗೂ ನಂದೀಶ್ ಮೈಸೂರು ಕಾರಾಗೃಹ, ಜಗದೀಶ್- ಶಿವಮೊಗ್ಗ, ಧನರಾಜ್-ಧಾರವಾಡ, ವಿನಯ್ -ವಿಜಯಪುರ, ನಾಗರಾಜ್ -ಕಲಬುರಗಿ, ಲಕ್ಷ್ಮಣ – ಶಿವಮೊಗ್ಗ, ಪ್ರದೂಶ್ನನ್ನು ಬೆಳಗಾವಿ ಜೈಲಿಗೆ ವರ್ಗಾಯಿಸಲಾಗಿದೆ.
ಜೈಲಿನಲ್ಲಿರುವ ದರ್ಶನ್ ಅವರ ಲೇಟೆಸ್ಟ್ ಫೋಟೋವೊಂದು ಎಲ್ಲೆಡೆ ವೈರಲ್ ಆಗಿತ್ತು. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ದರ್ಶನ್ ಮತ್ತೊಬ್ಬ ಆರೋಪಿ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ವಿಡಿಯೋ ಕೂಡ ವೈರಲ್ ಆಗಿದೆ.
ಈ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ನ್ಯಾಯಾಲಯ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಜೈಲಾಧಿಕಾರಿಗಳು ಮಾಡಿದ ಮನವಿ ಮೇರೆಗೆ ಕೋರ್ಟ್ ದರ್ಶನ್ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಕೋರ್ಟ್ ಅನುಮತಿ ಸಿಗುತ್ತಿದ್ದಂತೆ ಜೈಲಾಧಿಕಾರಿಗಳು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.
ದರ್ಶನ್ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರ ಆರೋಪಿಗಳು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದು, ಡಿ ಗ್ಯಾಂಗ್ ಛಿಧ್ರ ಛಿಧ್ರವಾಗುತ್ತಿದೆ. ಅತ್ತ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವುದು ಖಚಿತವಾಗುತ್ತಿದ್ದಂತೆ ಇತ್ತ ದರ್ಶನ್ ಹೊಸ ವರಸೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಜೈಲಾಧಿಕಾರಿಗಳಿಗೆ ಮತ್ತೊಂದು ತಲೆ ನೋವು ಎದುರಾಗಿದೆ. ಪರಪ್ಪನ ಅಗ್ರಹಾರದಲ್ಲಿ ಎರಡು ತಿಂಗಳಿಗೂ ಹೆಚ್ಚು ಜೈಲುವಾಸ ಅನುಭವಿಸಿರುವ ದರ್ಶನ್, ಬಳ್ಳಾರಿ ಜೈಲಿಗೆ ಹೋಗಲು ನಕಾರ ತೆಗೆದು ಜೈಲಾಧಿಕಾರಿಗಳ ಬಳಿ ನಾನು ಬಳ್ಳಾರಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆ ಜೈಲಿಗೆ ನಾನ್ಯಾಕೆ ಹೋಗಬೇಕು ಎಂದು ದರ್ಶನ್ ಪಟ್ಟು ಹಿಡಿದಿದ್ದು, ಅಧಿಕಾರಿಗಳು ದರ್ಶನ್ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನ್ಯಾಯಾಲಯದ ಆದೇಶವಿರುವ ಕಾರಣ ಜೈಲಾಧಿಕಾರಿಗಳು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲೇ ಬೇಕಾದ ಅನಿವಾರ್ಯತೆ ಇದ್ದು, ಈ ಸಮಯದಲ್ಲಿ ಅಧಿಕಾರಿಗಳು ಯಾವ ರೀತಿ ಹೆಜ್ಜೆಯಿಡಲಿದ್ದಾರೆ ಎಂದು ಕಾದು ನೋಡಬೇಕಿದೆ.