ಮಂಡ್ಯ ನಗರಸಭೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಈ ಮೂಲಕ ಸಚಿವ ಚಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದಾರೆ. ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ನ ನಾಗೇಶ್ ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಗದ್ದುಗೆ ಏರಿದ್ದಾರೆ. ಈ ಮೂಲಕ ಜೆಡಿಎಸ್ 2ನೇ ಅವಧಿಗೆ ಅಧಿಕಾರಕ್ಕೇರಿದೆ.ಒಟ್ಟು 35 ಸದಸ್ಯರು, ಸಂಸದರು ಶಾಸಕರಿಗೆ ಮತದಾನದ ಹಕ್ಕು ಇತ್ತು. ಜೆಡಿಎಸ್ ಪರ 19 ಕಾಂಗ್ರೆಸ್ ಪರ 18 ಮತಗಳು ಚಲಾವಣೆಯಾಗಿವೆ.
35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆಯಲ್ಲಿ 1ಸಂಸದ, 1 ಶಾಸಕ, ಜೆಡಿಎಸ್ ನ 18 ಸದಸ್ಯರು, ಬಿಜೆಪಿ 2 ಸದಸ್ಯರು, ಕಾಂಗ್ರೆಸ್ನ 10 ಸದಸ್ಯರು ಹಾಗು 5 ಪಕ್ಷೇತರ ಸದಸ್ಯರು ಸೇರಿ ಒಟ್ಟು 37 ಜನರಿಗೆ ಮತದಾನದ ಹಕ್ಕಿತ್ತು.
ಆಪರೇಷನ್ ಗೆ ಸೆಡ್ಡು ಹೊಡೆದು ಮಂಡ್ಯ ನಗರಸಭೆ ಚುನಾವಣೆಯಲ್ಲಿ ಮೈತ್ರಿ ಕೂಟ ನಗರಸಭೆಯ ಗದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ
ಎಚ್ ಡಿ ಕುಮಾರಸ್ವಾಮಿಗೆ ಜೈಕಾರ ಕೂಗಿ ಹರ್ಷ ಪಟ್ಟಿದ್ದಾರೆ.
ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂಬ ಶಾಸಕ ಗಣಿಗ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಎಚ್ ಡಿ ಕುಮಾರಸ್ವಾಮಿ, ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಸನ್ನೆ, ಕೈಸನ್ನೆ ಮೂಲಕವೂ ಹಣದ ಆಮಿಷ ಒಡ್ಡಿದ್ದಾರೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ, ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕ್ಯಾಬಿನೆಟ್ ಸಭೆ ಬಿಟ್ಟು ಪ್ರಧಾನಮಂತ್ರಿ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದರು. ನಮ್ಮ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡ್ರು ಎಂಬುದು ಗೊತ್ತಿದೆ.
ಮಹದೇವು ನಿಷ್ಠಾವಂತ ಜೆಡಿಎಸ್ ಸದಸ್ಯರಾಗಿದ್ದು, ಪಕ್ಷ ಮುಖ್ಯ ಎಂದು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ ಕುಟುಂಬ ಸದಸ್ಯರು ಬ್ಲಾಕ್ ಮೇಲ್ ಮಾಡಿದ್ರು. ಅದಕ್ಕಾಗಿ ಸದಸ್ಯರನ್ನು, ಕುಟುಂಬಸ್ಥರನ್ನು ಇಟ್ಟುಕೊಂಡು ಚುನಾವಣೆ ಮಾಡಲು ಮುಂದಾಗಿದ್ರು. ಇದರ ವಿರುದ್ಧ ಮಹದೇವು ತೆಗೆದುಕೊಂಡ ನಿರ್ಧಾರ ಪಕ್ಷನಿಷ್ಠೆ ತೋರಿದೆ ಅವರ ಮನೆಗೆ ತೆರಳಿ ಕೃತಜ್ಞತೆ ತಿಳಿಸುತ್ತೇನೆ ಎಂದು ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ.