ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪ್ರತಿನಿತ್ಯ ಎರಡು ಬಾರಿ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಡಾ ಪ್ರಭುಗೌಡ ತಿಳಿಸಿದ್ದಾರೆ. ದಸರಾ ಗಜಪಡೆಗೆ ಯಾವ ರೀತಿ ಆಹಾರ ಕೊಡುತ್ತಿದ್ದೇವೆಂದು ಜನರಿಗೆ ಗೊತ್ತಾಗಬೇಕು. ಆನೆಗಳ ತೂಕ ಹೆಚ್ಚಿಸಲು ಮತ್ತು ಅವುಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿನಿತ್ಯವ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ವಿವಿಧ ಬಗೆಯ ಧಾನ್ಯಗಳನ್ನು ಬೇಯಿಸಿ ಅದಕ್ಕೆ ತರಕಾರಿಗಳನ್ನು ಮಿಶ್ರಣ ಮಾಡಿ ಪ್ರತಿನಿತ್ಯ 2 ಬಾರಿ ನೀಡಲಾಗುತ್ತಿದೆ.ಅದರ ಜೊತೆಗೆ ಹಸಿರು ಹುಲ್ಲು, ಆಲದಮರದ ಸೊಪ್ಪು, ಒಣ ಹುಲ್ಲು, ಕುಸುರೆಯನ್ನು ನೀಡಲಾಗುತ್ತಿದೆ. ಎಲ್ಲಾ ಆನೆಗಳ ಆರೋಗ್ಯವಾಗಿ ಚೆನ್ನಾಗಿದೆ.
ಕಂಜನ್ ಆನೆಗೆ ಮೊದಲ ದಿನ ಕಾಲು ನೋವು ಇತ್ತು ಆದರೀಗ ಕಂಜನ್ ಚೆನ್ನಾಗಿದ್ದಾನೆ, ಬುಧವಾರ ಸಂಜೆಯ ತಾಲೀಮಿನಲ್ಲಿ ಭಾಗಿಯಾಗಿದ್ದಾನೆ ಎಂದಿದ್ದಾರೆ.
ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆಜಿ ಆಹಾರ, ಹೆಣ್ಣು ಆನೆಗೆ 450 ರಿಂದ 500 ಕೆಜಿ ಆಹಾರ ನೀಡುತ್ತೇವೆ.ಇದಲ್ಲದೆ ಅವರ ತೂಕಕ್ಕೆ ಅನುಗುಣವಾಗಿ ಒಂದು ಆನೆಗೆ ಪ್ರತಿನಿತ್ಯ 6 ರಿಂದ 7 ಕೆಜಿ ಪ್ರೋಟಿನ್ ಯುಕ್ತ ಆಹಾರ ಕೊಡಲಾಗುತ್ತಿದೆ. ಭತ್ತ, ಗೋಧಿ, ಬೇಳೆ, ಬೆಲ್ಲ, ತರಕಾರಿ, ಬೆಣ್ಣೆ ಮಿಶ್ರಿತ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿರುವಂತ ಏಕಲವ್ಯನ ಬಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದಸರಾಗೆ ಆಗಮಿಸಿರುವ ಏಕಲವ್ಯ ಪಳಗಿದ ಆನೆಯಂತೆ ವರ್ತಿಸುತ್ತಿದೆ. ಹಲವು ವರ್ಷಗಳಿಂದ ದಸರಾದಲ್ಲಿ ಭಾಗಿಯಾಗಿದೆಯೇನೋ ಎಂಬಂತೆ ಏಕಲವ್ಯ ವರ್ತಿಸುತ್ತಿದ್ದು ಭವಿಷ್ಯದಲ್ಲಿ ಅಂಬಾರಿ ಆನೆಯೂ ಆಗಬಹುದು ಎಂದಿದ್ದಾರೆ.
ನಾಡ ಹಬ್ಬವನ್ನು ಆನೆಗಳಿಂದಲೇ ಆಚರಿಸಬೇಕು ಅದಕ್ಕಾಗಿ ಆನೆಗಳಿಗೆ ವಿಶೇಷ ಆಹಾರ ಅವಶ್ಯಕತೆ ಇರುತ್ತದೆ, ಹಾಗೆಯೇ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.