ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಮುಡಾ ಆಯುಕ್ತ ಕೆಎಎಸ್ ಅಧಿಕಾರಿ ಜಿಟಿ ದಿನೇಶ್ ಕುಮಾರ್ ಗೆ ರಾಜ್ಯ ಸರ್ಕಾರ ಇಂದು ಬಂಪರ್ ಗಿಫ್ಟ್ ನೀಡಿದೆ. 50:50 ಅನುಪಾತದಡಿ ನಿವೇಶನ ಹಂಚಿಕೆ ಸಂಬಂಧ ಮುಡಾದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೆಎಎಸ್ ಅಧಿಕಾರಿ ಜಿ ಟಿ ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಆರೋಪ ಕೇಳಿ ಬಂದ ಬೆನ್ನಲ್ಲೇ ಮೈಸೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್. ದಿಢೀರ್ ಸಭೆ ನಡೆಸಿ ಮುಡಾ ಆಯುಕ್ತರಾಗಿದ್ದ ಜಿ ಟಿ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಯಾವುದೇ ಸ್ಥಳ ತೋರಿಸದೇ ವರ್ಗಾವಣೆಮಾಡಿದ್ದ ಜಿ ಟಿ ದಿನೇಶ್ ಕುಮಾರ್ ಗೆ ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ ಮಾಡಿದೆ.
ಯಾವುದೇ ಸ್ಥಳ ನಿಯೋಜನೆ ಮಾಡದೆ, ವರ್ಗಾವಣೆ ಮಾಡಿದ್ದ ಜಿಟಿ ದಿನೇಶ್ ಕುಮಾರ್ ಸ್ಥಳ ನಿರೀಕ್ಷಣೆಯಲ್ಲಿದ್ದರು, ಇದೀಗ ಸರ್ಕಾರ ಅವರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ ಮಾಡಿದೆ. ಈ ಮೂಲಕ ಮಾಜಿ ಮುಡಾ ಆಯುಕ್ತರಿಗೆ ರಾಜ್ಯ ಸರ್ಕಾರದಿಂದ ಗಿಫ್ಟ್ ದೊರೆತಂತಾಗಿದೆ.
ಸದ್ಯ ಜಿ ಟಿ ದಿನೇಶ್ ಕುಮಾರ್ ನ್ನು ಸರ್ಕಾರ ಹಾವೇರಿ ವಿವಿಯ ಕುಲಸಚಿವರಾಗಿ ವರ್ಗಾವಣೆ ಮಾಡಿದ್ದು, ಸರ್ಕಾರದ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.