ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆರೋಪಿಗಳಾದ ಪವನ್, ನಂದೀಶ್, ರಾಘವೇಂದ್ರ ಅವರನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಕೋರ್ಟ್ ಆದೇಶದ ಮೇರೆಗೆ ದರ್ಶನ್ ಮತ್ತು ಸಂಗಡಿಗರನ್ನ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ, ಅದರಂತೆ ಇಂದು ಮೈಸೂರು ಜೈಲಿಗೆ ಮೂವರು ಆರೋಪಿಗಳನ್ನು ಪೊಲೀಸರು ಕರೆ ತಂದಿದ್ದಾರೆ.
ನಿನ್ನೆ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಂದು ಮೈಸೂರು ಜೈಲಿಗೆ A3 ಆರೋಪಿ ಪವನ್, A4 ಆರೋಪಿ ರಾಘವೇಂದ್ರ, A5 ಆರೋಪಿ ನಂದೀಶ್ ಅವರನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ಬೆಳಿಗ್ಗೆಯೇ ಮೈಸೂರು ಜೈಲಿಗೆ ಶಿಫ್ಟ್ ಆಗಬೇಕಿದ್ದ ಆರೋಪಿಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಜೈಲಿನಲ್ಲಿ ಐಷಾರಮಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಪೂರಕವಾದ ಪೋಟೊ ವೈರಲ್ ಆಗಿತ್ತು. ಈ ಕಾರಣಕ್ಕಾಗಿಯೇ ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದ್ದು, ಇಂದು ಮೈಸೂರಿಗೆ ಬಂದಿರುವ ಆರೋಪಿಗಳನ್ನು ಕೂಡ ಪೋಲಿಸರು ಪರಿಶೀಲಿಸಿದ್ದಾರೆ. ಬಂದಿದ ತಕ್ಷಣ ಬ್ಯಾಗ್ ಪರಿಶೀಲನೆ ಮಾಡಿ, ನಂತರ ವೈದ್ಯರ ತಂಡದಿಂದ ಆರೋಪಿಗಳ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಅಲ್ಲದೆ ಮೆಟಲ್ ಡಿಟೆಕ್ಟರ್ ಬಳಸಿ ಅವರ ಬಟ್ಟೆಗಳ ಸಮೇತ ಪ್ರತಿ ವಸ್ತುಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕ ರಮೇಶ್ ಕುಮಾರ್ ಮಾತನಾಡಿ, ಮೂವರು ಆರೋಪಿಗಳನ್ನು ಕಾರಾಗೃಹದ ನಿಯಮಾನುಸಾರ ತಪಾಸಣೆ ಮಾಡಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳು ಒಂದನೇ ಹಂತದ ತಪಾಸಣೆ ಮಾಡಿದ್ದಾರೆ ಹಾಗೆಯೇ ಜೈಲಿನಲ್ಲಿ ಎರಡನೇ ಹಂತದ ತಪಾಸಣೆ ನಡೆಯಲಿದೆ. ವಾರಕ್ಕೆರಡು ಬಾರಿ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕೊಡಲಾಗುತ್ತದೆ. ಯಾವುದೇ ವಿಶೇಷ ಸೌಲಭ್ಯ ನೀಡದೆ, ಸಾಮಾನ್ಯ ಖೈದಿಗಳಂತಯೇ ಇವರನ್ನು ಪರಿಗಣಿಸುತ್ತೇವೆ ಎಂದರು. ಅಲ್ಲದೆ ಮೈಸೂರು ಜೈಲಿನಲ್ಲಿ ಜಾಮರ್ ಇಲ್ಲವೆಂಬ ಕಾರಣಕ್ಕೆ ನಿಷೇಧಿತ ವಸ್ತುಗಳನ್ನು ಜೈಲಿಗೆ ತರುವಂತಿಲ್ಲ. ಆರೋಪಿಗಳನ್ನು ಆಗಾಗ್ಗೆ ತಪಾಸಣೆ ನಡೆಸುತ್ತೇವೆ ಎಂದು ತಿಳಿಸಿದರು.