ಚಾಮರಾಜನಗರ : ಬಿಜೆಪಿಯವರಿಗೆ 100 ಕೋಟಿ ಕೊಟ್ಟು ಶಾಸಕರನ್ನು ಖರೀದಿ ಮಾಡುವುದು ಹೊಸದೇನಲ್ಲ. ಆದರೆ ನನಗೆ ಯಾವ ಮಗನೂ ಆಫರ್ ಮಾಡುವುದಕ್ಕೆ ಆಗಲ್ಲ. ಒಂದು ವೇಳೆ ಆಫರ್ ಮಾಡಲು ಬಂದರೆ ಅವನ ಗ್ರಹಚಾರ ಬಿಡಿಸುತ್ತೇನೆ ಎಂದು ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಬಿಜೆಪಿಯ ವಿರುದ್ದ ಗುಡುಗಿದರು.
ಬಿಜೆಪಿಯ ಆಪರೇಷನ್ ಕಮಲಕ್ಕೆ ಕೋಟಿ ಕೋಟಿ ಆಫರ್ ನೀಡುವ ವಿಚಾರ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿಗೆ ಆಪರೇಷನ್ ಕಮಲ ಹೊಸದೇನಲ್ಲ. ರಾಜಕೀಯ ಕಲುಷಿತ ಆಗಲು ಬಿಜೆಪಿಯವರೇ ಕಾರಣ. ಅವರು 2008 ರಿಂದ ಅಪರೇಷನ್ ಕಮಲ ಆರಂಭ ಮಾಡಿದರು. ಅಂದಿನಿಂದ ಎಲ್ಲರ ಮಾನ ಮರ್ಯಾದೆ ಹೋಯಿತು. ಇದರಿಂದ ನಮ್ಮಂತಹ ನಿಷ್ಠಾವಂತರನ್ನೂ ಬೀದಿಯಲ್ಲಿ ಹೋಗುವ ಜನರು ಕ್ಯಾಕರಿಸಿ ಉಗಿಯುವ ಸ್ಥಿತಿ ಬಂದಿದೆ. ಇದಕ್ಕೆಲ್ಲ ಬಿಜೆಪಿಯವರೇ ಕಾರಣ ಎಂದರು.
ಬಿಜೆಪಿಯವರು ನೇರವಾಗಿ ಯಾರು ಮುಖ್ಯ ಮಂತ್ರಿ ಆಗಿದ್ದಾರೆ. ಅವರೆಲ್ಲರೂ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರು. ನಾನು ಎಲ್ಲವನ್ನೂ ನೇರವಾಗಿ ಹೇಳುತ್ತೇನೆ. ಬಿಜೆಪಿಗರು ಮೋಸಗಾರರು. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನ ರಾಜಕೀಯ ಜೀವನವನ್ನೇ ಅತಂತ್ರ ಸ್ಥಿತಿಗೆ ತಂದು ಬಿಟ್ಟರು. ಈಗ ಅವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ. ಬೇರೆ ಶಾಸಕರಿಗೆ ಆಫರ್ ಇರಬಹುದು, ಅದರ ಮಾಹಿತಿ ನನಗಿಲ್ಲ.ಆದರೆ 136 ಜನ ಶಾಸಕರಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದು ಸಾಧ್ಯವಿಲ್ಲ ಎಂದರು.