ಜಿಲ್ಲಾಧಿಕಾರಿಗಳೊಂದಿಗೆ ಮಂಜುನಾಥ ಭಂಡಾರಿ ಸಮಾಲೋಚನೆ
ಪ್ರತಿನಿಧಿ ವರದಿ ಮಂಗಳೂರು
ದಶಕದಿಂದ ಮಂಗಳೂರಿನ ಪಿಳಿಕುಲ ನಿಸರ್ಗಧಾಮದಲ್ಲಿ ನಡೆಯುತ್ತಿದ್ದ ಕಂಬಳ ಸ್ಥಗಿತಗೊಂಡಿದ್ದು, ಆ ಪರಿಸರದಲ್ಲಿ ಜರುಗುತ್ತಿದ್ದ ವಿವಿಧ ಕಾರ್ಯಕ್ರಮಗಳು ಕಳೆಗುಂದಿರುತ್ತದೆ. ಆ ವೈಭವವನ್ನು ಮರು ಸ್ಥಾಪಿಸಲು ಈ ಕಾರ್ಯಕ್ರಮಗಳನ್ನು ರೂಪಿಸುವುದು ಸಮಯೋಚಿತವಾಗಿದೆ.
ಈ ವರ್ಷದ ನ.14 ರಿಂದ 18ರವರೆಗೆ ಪಿಲಿಕುಳೋತ್ಸವ ಹೆಸರಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕೆಳಗಿನಂತೆ ಜಿಲ್ಲಾ ಸಾಂಸ್ಕೃತಿಕ ಉತ್ಸವ, ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ನ.14ರಂದು ಕಾರ್ಯಕ್ರಮದ ಉದ್ಘಾಟನೆ ಮಕ್ಕಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಮಕ್ಕಳ ಹಬ್ಬ ಆಯೋಜಿಸುವುದು. ನ.15ರಿಂದ ಕೃಷಿ ಮತ್ತು ಜಾನುವಾರು ಮೇಳ, ನ.16 ರಂದು ಕೆಸರು ಗದ್ದೆಯಲ್ಲಿ ಜಿಲ್ಲಾ ಮಟ್ಟದ ಜಾನಪದ ಕ್ರೀಡಾ ಕಾರ್ಯಕ್ರಮ, ನ.17 ಮತ್ತು 18ರಂದು ಕಂಬಳ ನಡೆಸುವುದು ಹಾಗೂ ಪ್ರತೀ ದಿನ ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿನೂತನವಾದ ಕಾರ್ಯಕ್ರಮಕ್ಕೆ ಮಾನ್ಯ ಕರ್ನಾಟಕ ವಿಧಾನ ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಚುನಾಯಿತ ಪ್ರತಿನಿಧಿಗಳು ಮತ್ತು ಕಂಬಳ ಸಮಿತಿಯೊಂದಿಗೆ ಚರ್ಚಿಸಿ ಕಾರ್ಯಕ್ರಮದ ರೂಪುರೇಖೆ ರಚಿಸಸಲಾಗುವುದು ಎಂದು ಮಂಜುನಾಥ ಭಂಡಾರಿ ತಿಳಿಸಿದರು.