ರೈತನಿಗೆ ಭೂ ಪರಿಹಾರ ನೀಡದ ಹಿನ್ನೆಲೆ ಮೈಸೂರಿನ ಕೆ ಐ ಎ ಡಿ ಬಿ ಕಚೇರಿಯ ವಸ್ತುಗಳನ್ನು ಇಂದು ಜಪ್ತಿ ಮಾಡಲಾಗಿದೆ. ಮೈಸೂರು ನ್ಯಾಯಾಲಯದ ಆದೇಶದಂತೆ ಕೆ ಐ ಎ ಡಿ ಬಿ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ರೈತ ರಾಮಸ್ವಾಮಿ ಅವರಿಗೆ ನೀಡಬೇಕಾಗಿದ್ದ ಪರಿಹಾರ ನೀಡದಿರುವ ಕಾರಣ , ರೈತ ರಾಮಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದರು. 2000ನೇ ಇಸವಿಯಲ್ಲಿ 15 ಎಕರೆ ಜಮೀನನ್ನು ಕೈಗಾರಿಭಿವೃದ್ದಿಗಾಗಿ ಕೆ ಐ ಎ ಡಿ ಬಿ ವಶಪಡಿಸಿಕೊಂಡಿತ್ತು. ಜಮೀನು ವಶ ಪಡಿಸಿಕೊಂಡ ನಂತರ ಸೂಕ್ತ ಪರಿಹಾರ ನೀಡದ ಹಿನ್ನೆಲೆ ರೈತ ನ್ಯಾಯಾಲಯದ ಮೊರೆ ಹೋಗಿದ್ದರು. ವಕೀಲ ಜೆರಾಲ್ಡೋ ಕ್ಯಾಸ್ಟೋಲಿನ್ ಅವರು ರೈತ ರಾಮಸ್ವಾಮಿ ಪರ ವಾದಮಂಡಿಸಿದ್ದರು. ರೈತನಿಗೆ 39 ಕೋಟಿ ಪರಿಹಾರ ನೀಡುವಂತೆ ಮೈಸೂರು ನ್ಯಾಯಾಲಯ ಆದೇಶ ಹೊರಡಿಸುತ್ತಿದ್ದಂತೆ, ಈ ಸಂಬಂಧ ಕೆ ಐ ಎ ಡಿ ಬಿ ಹೈಕೋರ್ಟ್ ಮೊರೆ ಹೋಗಿತ್ತು.
ರೈತನಿಗೆ ಮುಂಗಡವಾಗಿ 17.5 ಕೋಟಿ ಹಣ ಜಮಾ ಮಾಡುವಂತೆ ಸೂಚಿಸಿದ್ದ ಕೋರ್ಟ್ ಆದೇಶದ ಮೇರೆಗೆ 17.5 ಕೋಟಿ ಹಣವನ್ನು ಕೆ ಐ ಎ ಡಿ ಬಿ ರೈತನಿಗೆ ಪಾವತಿ ಮಾಡಿತ್ತು. ಆದರೆ ಉಳಿದ ಹಣ ನೀಡದ ಕಾರಣ ಕಚೇರಿ ವಸ್ತುಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ಮಾಡಿತ್ತು. ಈ ಹಿನ್ನೆಲೆ ಇಂದು ಕೆ ಐ ಎ ಡಿ ಬಿ ಕಚೇರಿ ಕಂಪ್ಯೂಟರ್, ಪ್ರಿಂಟರ್, ಮೇಜು, ಕುರ್ಚಿ ಸೇರಿದಂತೆ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸದ್ಯ ರೈತನಿಗೆ 89 ಕೋಟಿ ಪಾವತಿಸಲು ಕೋರ್ಟ್ ಕೆ ಐ ಎ ಡಿ ಬಿ ಗೆ ಸೂಚಿಸಿದೆ.