ರಾಜ್ಯದಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗೋ ಮುನ್ನವೇ ರಾಜಕೀಯ ಮೇಲಾಟಗಳು ಜೋರಿವೆ. MLA ಟಿಕೆಟ್ ವಿಚಾರವಾಗಿ ದೋಸ್ತಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಸದ್ಯ ದೆಹಲಿ ಅಂಗಳದಲ್ಲಿ ಲಾಬಿ ಹೆಚ್ಚಾಗಿದ್ದು,ಬಿಜೆಪಿ ಹೈಕಮಾಂಡ್ ಏನು ಕ್ರಮ ಕೈಗೊಳ್ಳಲಿದೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಟಿಕೆಟ್ ಕೊಡಲೇ ಬೇಕು ಎಂದು ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಇದರ ಪರವಾಗಿ ಆರ್ ಅಶೋಕ್, ಆಶ್ವತ್ಥ ನಾರಾಯಣ ಹಾಗೂ ಬಸವರಾಜ ಬೊಮ್ಮಾಯಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಎಚ್ಡಿ ಕುಮಾರಸ್ವಾಮಿ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲು ಮುಂದಾಗಿದ್ದಾರೆ.
‘ಬೊಂಬೆನಾಡ’ಲ್ಲಿ ತ್ರಿಕೋನ ಫೈಟ್ ಫಿಕ್ಸ್..?
ಎಚ್ಡಿಕೆ , ಸಿಪಿವೈ ಪಟ್ಟು ಸಡಿಲಿಸದೆ ಇದ್ದಲ್ಲಿ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಕನ್ಫರ್ಮ್ ಆಗಲಿದೆ. ಈಗಾಗ್ಲೇ 400ಕ್ಕೂ ಹೆಚ್ಚು ಮಂದಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಇದೇ ವಿಚಾರ ಕುಮಾರಸ್ವಾಮಿ ನಿದ್ದೆಗೆಡಿಸಿದೆ. ಕ್ಷೇತ್ರದಲ್ಲಿ ಹಿಡಿತ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ. ಇತ್ತ ಚನ್ನಪಟ್ಟಣದಲ್ಲಿ ಟಿಕೆಟ್ ಕೊಡಲೇ ಬೇಕು ಎಂದು ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಟಿಕೆಟ್ ಕೊಡುವಂತೆ ಪಕ್ಷದ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸಿಪಿ ಯೋಗೇಶ್ವರ್ಗೆ ಟಿಕೆಟ್ ನೀಡಲು ಎಚ್ಡಿ ಕುಮಾಸ್ವಾಮಿ ಸಮ್ಮತಿ ಸೂಚಿಸಿಲ್ಲ. ಕಳೆದ ಎರಡು ಅವಧಿಯಲ್ಲಿ ನಾನು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲೇ ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕುಮಾರಸ್ವಾಮಿ-ಸಿಪಿ ಯೋಗೇಶ್ವರ್ ನಡುವೆ ನೀ ಕೊಡೆ, ನಾ ಬಿಡೆ ಫೈಟ್ ನಡೀತಾಯಿದೆ.
ಮೈತ್ರಿ ಲೆಕ್ಕಾಚಾರ ಹಾಗೂ ನಿಯಮ ಪ್ರಕಾರ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ನಾಯಕರಿಗೆ ಕುಮಾರಸ್ವಾಮಿ ಮನವರಿಕೆ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೂಡ ತಮ್ಮ ಪಟ್ಟು ಬಿಟ್ಟು ಕೊಡ್ತಿಲ್ಲ. ಅಂತಿಮವಾಗಿ ಏನಾಗಲಿದೆ ಅನ್ನೋದೇ ಭಯಂಕರ ಸಸ್ಪೆನ್ಸ್ ಆಗಿದೆ.
‘ದೋಸ್ತಿ’ ತಿಕ್ಕಾಟ.. ‘ಕೈ’ ಕಾದು ನೋಡೋ ತಂತ್ರ..!
ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಚಾರವಾಗಿ ದೋಸ್ತಿಗಳ ನಡುವೆ ಫೈಟ್ ಜೋರಾದರೆ ತ್ರಿಕೋನ ಸ್ಪರ್ಧೆಗೆ ದಾರಿಯಾಗುವ ಸಾಧ್ಯತೆ ಇದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಳಿಸಿದರೆ, ಸಿಪಿ ಯೋಗೇಶ್ವರ್ ಪಕ್ಷೇತರ ಅಥವಾ ಬಿಎಸ್ಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಗಿದ್ದಾಗ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ.
ಸದ್ಯ ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ದೋಸ್ತಿಗಳ ಭಿನ್ನಮತದ ಲಾಭವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲು ಪ್ಲಾನ್ ಮಾಡಿಕೊಂಡಿದೆ.ಅದರೆ ಕಾಂಗ್ರೆಸ್ ಯಾರನ್ನು ಅಭ್ಯರ್ಥಿಯನ್ನಾಗಿ ಅಖಾಡಕ್ಕೆ ಇಳಿಸಲಿದೆ ಎಂಬುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ವೈಯಕ್ತಿಕವಾಗಿ ನನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಇನ್ನು ಜೆಡಿಎಸ್ ಪಾಲಿಗೆ ಇದು ಭದ್ರಕೋಟೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಲೀಡ್ ಸಿಕ್ಕಿದೆ. ಆದರೆ ಬಿಜೆಪಿ ಮತನೆಲೆ ಹೊಂದಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ಎಚ್ಡಿಕೆ ಮತ್ತು ಬಿಜೆಪಿ ನಾಯಕರು ಯಾವ ರೀತಿಯಲ್ಲಿ ತೆರೆ ಎಳೆಯುತ್ತಾರೆ ಎಂಬುವುದು ಸದ್ಯದ ಕುತೂಹಲವಾಗಿದೆ.