ತಿರುಗಿ ನೋಡದ ನಗರಸಭೆ । ಜನರ ಆಕ್ರೋಶ । ಗಮನ ಹರಿಸಲ್ಲೂ ಸಾರ್ವಜನಿಕರ ಮನವಿ
ಎಸ್.ರುದ್ರೇಶ್ವರ ರಾಮನಗರ
ನಗರಕ್ಕೆ 210ಕ್ಕೂ ಮೀರಿದ ವರ್ಷಗಳ ಇತಿಹಾಸವಿದೆ. ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗೂ ಸರಿಸುಮಾರು ಎರಡು ಶತಮಾನಗಳ ಆಯಸ್ಸು! ಆದರೀಗ ಈ ಸೇತುವೆಯು ನಿರ್ವಹಣೆ ಇಲ್ಲದೆ ಶಿಥಿಲವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಸೇತುವೆಯ ಮೇಲೆ ಗಿಡಗಂಟೆಗಳು ಬೆಳೆಯುತ್ತಿವೆ. ಇವು ದಿನ ಕಳದಂತೆಲ್ಲ ಸೇತುವೆಯನ್ನು ದುರ್ಬಲಗೊಳಿಸುವುದರಲ್ಲಿ ಸಂಶಯವಿಲ್ಲ. ರಾಮನಗರದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಸೇತುವೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮುಂದಾಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
210 ವರ್ಷಗಳ ಹಿಂದೆ ಅರ್ಕಾವತಿ ನದಿ ಜೀವ ನದಿಯಾಗಿತ್ತು. ಸದಾ ಭೋರ್ಗರೆಯುತ್ತಿತ್ತು. ನಗರ ಮತ್ತು ಐಜೂರು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಸೇತುವೆ ನಿರ್ಮಾಣವಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್ ತಿಳಿಸಿದರು.
1801ರ ಸುಮಾರಿನಲ್ಲಿ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಈ ಭಾಗದ ದಿವಾನರಾಗಿದ್ದ ಬಕ್ಷಿ ಬಾಳಾಜಿ ರಾಯರು ಸೇತುವೆ ನಿರ್ಮಾಣದ ಕಾರಣಕರ್ತರು. 50ವರ್ಷಗಳ ಹಿಂದೆ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ವಾಹನಗಳು ಇದೇ ಸೇತುವೆಯನ್ನು ಹಾದು ಹೋಗುತ್ತಿದ್ದವು. ನಂತರ ಅರ್ಕಾವತಿ ನದಿಗೆ ಬೇರೊಂದು ಸೇತುವೆಯನ್ನು ನಿರ್ಮಿಸಿದ್ದರಿಂದ ಈ ಸೇತುವೆಯ ಮೇಲೆ ಹೆದ್ದಾರಿ ವಾಹನಗಳ ಹೊರೆ ಕಡಿಮೆಯಾಗಿದೆ ಎಂದರು.
ಆದರೆ ನಗರ ಬೆಳೆದಂತೆಲ್ಲ ವಾಹನ ದಟ್ಟಣೆಯೂ ಹೆಚ್ಚಾಗಿದ್ದರಿಂದ ಸದರಿ ಸೇತುವೆಯನ್ನು ಐದಾರು ಅಡಿಗಳಷ್ಟು ವಿಸ್ತರಿಸಲಾಗಿದೆ. ಸದ್ಯ ಈ ಸೇತುವೆಯ ಪ್ಲಾಸ್ಟಿಂಗ್ ಬಿರುಕು ಬಿಟ್ಟುರುವ ಸ್ಥಳದಲ್ಲೆಲ್ಲ ಗಿಡಗಂಟೆಗಳು ಬೆಳೆದಿವೆ. ಇವು ಕ್ರಮೇಣ ಸೇತುವೆಯನ್ನು ದುರ್ಬಲಗೊಳಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರ ಸಭೆ ಎಚ್ಚೆತ್ತುಕೊಳ್ಳಲಿ: ನಗರಸಭೆಯ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಗಿಡಗಂಟೆಗಳೆನ್ನಲ್ಲ ಕಿತ್ತುಹಾಕಿ, ದುರಸ್ಥಿಯ ಅಗತ್ಯವಿದ್ದರೆ ವೈಜ್ಞಾನಿಕವಾಗಿ ದುರಸ್ಥಿಗೊಳಿಸಿ ಇತಿಹಾಸದ ಕುರುಹು ಆಗಿರುವ ಈ ಸೇತುವೆಯನ್ನು ಉಳಿಸಿಕೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಪ್ರದೇಶ- ಪ್ರದೇಶಗಳ ನಡುವೆ ಸಂಪರ್ಕ ಮತ್ತು ಮನಸ್ಸು-ಮನಸ್ಸುಗಳ ಮಧ್ಯೆ ಬಾಂಧವ್ಯ ಬೆಸೆಯುವ ಪ್ರತೀಕವಾಗಿಯೂ ಈ ಪದಕ್ಕೆ ವಿಶೇಷ ಅರ್ಥ ಪ್ರಾಪ್ತವಾಗುತ್ತದೆ. ಈ ನೆಲೆಯಿಂದ ರಾಮನಗರದ ಅರ್ಕಾವತಿ ಸೇತುವೆಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ ಎಂದು ಸಾಹಿತಿ ಡಾ.ಎಲ್.ಸಿ.ರಾಜು ತಿಳಿಸಿದರು.
ಅರ್ಕಾವತಿ ನದಿಯ ಒಂದು ದಂಡೆಯಲ್ಲಿ ಮಾತ್ರ ಸ್ಥಾಪಿತವಾಗಿದ್ದ ನಗರದ ಅಸ್ತಿತ್ವವನ್ನು ಮತ್ತೊಂದು ದಂಡೆಗೆ ವಿಸ್ತರಿಸಿದ್ದು ಮತ್ತು ಜನಜೀವನದಲ್ಲಿ ಪರಸ್ಪರ ಬಾಂಧವ್ಯವನ್ನು ರೂಪಿಸಿದ್ದು ಈ ಸೇತುವೆಯ ಹೆಗ್ಗಳಿಕೆ ಎಂದರು.
ಇಂದು ಅರ್ಕಾವತಿ ನದಿ ಕೊಳಚೆ ತುಂಬಿದ ಗಟಾರವಾಗಿದೆ. ಭಕ್ಷಿ ಬಾಲಾಜಿರಾಯರ ಗರ್ಭಿಣಿ ಸೊಸೆ ಪ್ರಾಣಾರ್ಪಣೆ ಮಾಡಿದ ಪ್ರತೀತಿ ಹೊಂದಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದೆ ಎಂದು ಹೇಳಿದರು.
ನದಿ ಮತ್ತು ಸೇತುವೆಯ ಈ ದುರವಸ್ಥೆ ಇಂದಿನ ಜನರ ಬದುಕು ಮತ್ತು ಮನಸ್ಸುಗಳಿಗೆ ಸಾಂಕೇತಿಕ ಪ್ರತಿಮೆಯೂ ಆಗಿದೆ. ‘ಅಭಿವೃದ್ಧಿ’ಯ ಹುಸಿ ಭ್ರಮೆಯಲ್ಲಿ ನಗರದ ಆಂತರಿಕ ಚೆಲುವು ಶಿಥಿಲವಾಗಿದೆ ಎಂದು ತಿಳಿಸಿದರು.
‘ಭೂಮಿ’ಯ ಬೆಲೆ ‘ಆಕಾಶ’ಕ್ಕೇರಿ ಮಾನವೀಯತೆ ಎಂಬುದು ‘ಪಾತಾಳ’ ಸೇರಿದೆ. ನದಿಯ ಕೊಳಚೆ ಮತ್ತು ಸೇತುವೆಯ ಶಿಥಿಲತೆಗಳು ಮನುಷ್ಯರೊಳಗಿನ ಮಾನವತೆಯ ಕೊರತೆಯನ್ನು ಸಂಕೇತಿಸುವಂತಿವೆ. ಹಾಗಾಗಿ, ಶಿಥಿಲಗೊಂಡಿರುವ ಸೇತುವೆ ಮರು ಕಾಯಕಲ್ಪ ಒದಗಬೇಕು ಮತ್ತು ಜನರ ನಡುವಿನ ಮಾನವೀಯ ಸಂಬಂಧ ಮರು ಸ್ಥಾಪಿತವಾಗಬೇಕು. ಇದು ಅನಿವಾರ್ಯವಾಗಿ ಆಗಬೇಕಾಗಿರುವ ದುರಸ್ತಿ ಕಾರ್ಯ ಎಂದರು.
——————-
ಕೋಟ್
ರಾಮನಗರದ ಅರ್ಕಾವತಿ ನದಿಗೆ ಊರಿನ ಹೃದಯ ಭಾಗದಲ್ಲಿ ಕಟ್ಟಲಾಗಿರುವ ಸೇತುವೆ ಇನ್ನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿದೆ. ‘ಸೇತುವೆ’ ಎಂಬ ಶಬ್ದಕ್ಕೆ ಒಂದು ವಿಶಿಷ್ಟ ರೂಪಕಾತ್ಮಕ ಅರ್ಥವಿದೆ.
– ಡಾ.ಎಲ್.ಸಿ.ರಾಜು, ಸಾಹಿತಿ
ಪೋಟೋ: ಅರ್ಕಾವತಿ ನದಿಗೆ ನಿರ್ಮಿಸಿರುವ ಸೇತುವೆಯಲ್ಲಿ ಬಿರುಕು ಬಿಟ್ಟ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದಿದ್ದು, ಸೇತುವೆಯನ್ನು ಶಿಥಿಲಗೊಳಿಸುತ್ತಿವೆ.