ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಮಾಹಿತಿ
ಪ್ರತಿನಿಧಿ ವರದಿ ಮಂಗಳೂರು
ಅಂಚೆ ಅಪಘಾತ ವಿಮಾ ಯೋಜನೆ ದೇಶದ ಅತ್ಯುತ್ತಮ ಸರಳವಾದ ಜನಸಾಮಾನ್ಯರ ಕೈಗೆಟುಕುವ ವಿಮಾ ಯೋಜನೆಯಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆಯಿಂದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಅಂಚೆ ಅಪಘಾತ ವಿಮಾಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದರು.
ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಒಂದು ಲಕ್ಷದ ಅರುವತ್ತನಾಲ್ಕು ಸಾವಿರ ಅಂಚೆ ಕಚೇರಿಗಳನ್ನು ಹೊಂದಿರುವ ಬಲಿಷ್ಠವಾದ ಸೇವಾ ಜಾಲವನ್ನು ಹೊಂದಿದೆ. ನೂತನ ಅಂಚೆ ಪಾವತಿ ಬ್ಯಾಂಕ್ ಆರು ವರ್ಷ ಪೂರ್ಣ ಗೊಳಿಸಿ 7ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಅಂಚೆ ಇಲಾಖೆಯ ಅಪಘಾತ ವಿಮಾಯೋಜನೆ ಆದಿತ್ಯ ಬಿರ್ಲಾ ಸಂಸ್ಥೆಯ ಜತೆ ಒಡಂಬಡಿಕೆಯೊಂದಿಗೆ ಜಾರಿಯಾಗಿದೆ. ಇದು 10 ಮತ್ತು 15ಲಕ್ಷ ರೂ. ಮೊತ್ತದ ಅಪಘಾತ ವಿಮಾಯೋಜನೆಗೆ ಕ್ರಮವಾಗಿ ರೂ. 549, ರೂ.749 ವಿಮಾ ಕಂತು ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣ ಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗ ವೈಕಲ್ಯದ ಸಂದರ್ಭದಲ್ಲಿ ಮತ್ತು ಮರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು.
ಇದಲ್ಲದೆ ಅಂಚೆ ಪಾವತಿ ಬ್ಯಾಂಕ್ ಆದ ಬಳಿಕ ಭಾರತೀಯ ಅಂಚೆ ಇಲಾಖೆ ಆಧಾರ್ ನೋಂದಣಿ, ಠೇವಣಿ ಸ್ವೀಕಾರ, ಕೇಂದ್ರ ಸರ್ಕಾರದ ವಿವಿಧ ಯೋಜನೆ, ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮಾನ್, ಕಿಸಾನ್ ವಿಕಾಸ್ ಸರ್ಟಿಫಿಕೇಟ್, ಅಟಕ್ ಪೆನ್ಷನ್ ಯೋಜನೆ ಸೇರಿದಂತೆ ವಿಸ್ತೃತವಾದ ಸೇವೆ ನೀಡುತ್ತಿದೆ ಎಂದು ವಿವರಿಸಿದರು.
ಪತ್ರಕರ್ತರಿಗೆ ವಿಮಾ ನೋಂದಾಣಿ ಉಚಿತವಾಗಿದೆ. ಪ್ರತಿಯೊಬ್ಬರ ವಿಮಾ ವಾರ್ಷಿಕ ಪಾಲಿಸಿ ರೂ.549 ವೆಚ್ಚವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆ ಯಿಂದ (ಒಂದು ವರ್ಷಕ್ಕೆ) ಪಾವತಿಸಲಾಗುತ್ತಿದೆ. ಎಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದ್ದಾರೆ.
ಇಂಡಿಯನ್ ಪೋಸ್ಟಲ್ ಬ್ಯಾಂಕ್ ಮಂಗಳೂರು ವ್ಯವಸ್ಥಾಪಕ ಬಿ.ಶಿಯಾಝ್, ಭಾರತೀಯ ಅಂಚೆ ಇಲಾಖೆಯ ಮಂಗಳೂರು ಪ್ರಧಾನ ಅಂಚೆ ಕಚೇರಿಯ ಅಸಿಸ್ಟೆಂಟ್ ಪೋಸ್ಟ ಮಾಸ್ಟರ್ ಎಚ್.ಆರ್.ಚಂದ್ರಶೇಖ ರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ನಿಕಟ ಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮ ಕೃಷ್ಣ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಿ.ಎನ್.ಪುಷ್ಪ ರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಆರಿಫ್ ಪಡುಬಿದ್ರೆ, ಸಂದೇಶ್ ಜಾರ, ಸತೀಶ್ ಇರಾ ಇದ್ದರು.