ಪ್ರತಿನಿಧಿ ವರದಿ ಕೊಟ್ಟಿಗೆಹಾರ
ಕ್ಯಾಲಿಗ್ರಫಿ ಅಕ್ಷರವನ್ನು ಚಿತ್ರವಾಗಿಸುವ ಅಪೂರ್ವ ಕಲೆಯಾಗಿದ್ದು, ಅಕ್ಷರವನ್ನು ಕಲಾತ್ಮಕವಾಗಿ ಓದುಗರಿಗೆ ದಾಟಿಸುತ್ತದೆ ಎಂದು ಕಲಾವಿದ ಸುರೇಶ್ ಚಂದ್ರ ದತ್ತ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಅಕ್ಷಯ ವಿಸ್ಮಯ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಅಕ್ಷರದ ಅರ್ಥವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಕ್ಯಾಲಿಗ್ರಫಿಯ ಪಾತ್ರ ಹಿರಿದಾಗಿದೆ. ಕೈ ಬರಹ ಕಡಿಮೆಯಾಗುತ್ತಿರುವ ಕಾಲಮಾನದಲ್ಲಿ ಕ್ಯಾಲಿಗ್ರಫಿ ಕಾರ್ಯಾಗಾರದಂತಹ ಕಾರ್ಯಕ್ರಮಗಳು ಕೈ ಬರಹದ ಕೌಶಲ್ಯವನ್ನು ಕಲಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ಲೇಖಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಪ್ರದೀಪ್ ಕೆಂಜಿಗೆ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವು ತೇಜಸ್ವಿ ಅವರ ವಿಭಿನ್ನ ಹಾಗೂ ವೈವಿಧ್ಯಮಯ ಆಸಕ್ತಿಗಳಿಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಅದರ ಭಾಗವಾಗಿ ಮುಂದಿನ ದಿನಗಳಲ್ಲಿ ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಮಾತನಾಡಿ, ತೇಜಸ್ವಿ ಅವರ ಸಾಲುಗಳ ಕ್ಯಾಲಿಗ್ರಫಿಗಳನ್ನು ಈ ಎರಡು ದಿನದ ಕಾರ್ಯಾಗಾರದಲ್ಲಿ ಕಲಾವಿದರು ರಚಿಸಲಿದ್ದು, ಸೆ.೮ ರಂದು ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿವಿದೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಿಕಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕ್ಯಾಲಿಗ್ರಫಿ ಕಲಾವಿದ ಸುರೇಶ್ ವಾಘ್ಮೋರ್, ಟಿ.ಬಿ.ಕೋಡಿಹಳ್ಳಿ, ಜಿ.ಹರಿಕುಮಾರ್, ಮೋಹನ್ ಕುಮಾರ್, ಅನಿಮಿಷ್ ನಾಗನೂರ್, ಹರ್ಷ ಕಾವಾ, ವಿಶ್ವಕರ್ಮ ಆಚಾರ್ಯ, ತೇಜಸ್ವಿ ಒಡನಾಡಿಗಳಾದ ಬಾಪು ದಿನೇಶ್, ಕೀಟ ತಜ್ಞ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಮುಖ್ಯಸ್ಥ ಪ್ರಜ್ವಲ್, ಅನುದೀಪ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಸಂಗೀತಾ, ವಿದ್ಯಾರ್ಥಿಗಳು, ಕಲಿಕಾರ್ಥಿಗಳು ಇದ್ದರು.