ಮೈಸೂರು: ಚಾಮುಂಡಿ ಬೆಟ್ಟದ ಪ್ರಾಧಿಕಾರದ ಪ್ರಥಮ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ನಡೆ ಖಂಡಿಸಿ ಸಂಸದ ಯದುವೀರ್ ಒಡೆಯರ್ ಇಂದು ಸುದ್ದಿ ಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರದ ಸಭೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ಸಭೆ ಮಾಡಲು ಸಿಎಂ ಮುಂದಾಗಿದ್ದಾರೆ. ಸೆ.5 ರ ವರೆಗೂ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿದ್ದು, ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ. ಆದರೆ ಇಂದು ಇವರು ಮಾಡುತ್ತಿರುವ ಸಭೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಹೀಗಾಗಿ ಈ ಸಭೆಗೆ ನಾನು ಭಾಗವಹಿಸಿಲ್ಲ. ಪ್ರಾಧಿಕಾರದ ರಚನೆಯಿಂದ ನಮ್ಮ ಮೂಲ ಧಾರ್ಮಿಕ ನಂಬಿಕೆ ಹಕ್ಕುಗಳಿಗೆ ದಕ್ಕೆ ಉಂಟಾಗುತ್ತದೆ. ನಾವು ನಮ್ಮ ಧಾರ್ಮಿಕ ಹಕ್ಕುಗಳನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಪ್ರಾಧಿಕಾರವನ್ನ ವಿರೋಧಿಸಿ ನಾವು ನ್ಯಾಯಾಲಯದಲ್ಲಿ ನಾವು ಚಾಲೆಂಜ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ ಎಂದರು.
ದೇವಾಲಯ,ಮಸೀದಿ,ಚರ್ಚ್ ಗಳಿಗೆ ಪ್ರಾಧಿಕಾರ ಮಾಡುವುದು ಸೂಕ್ತ ಅಲ್ಲ. ದೇವಾಲಯ ಹುಂಡಿ ಹಣ ದೇವಾಲಯಗಳಿಗೆ ಬಳಕೆಯಾಗಬೇಕು ಅದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಅಲ್ಲದೆಜನಪ್ರತಿನಿಧಿಯಾಗಿ ಮುಂದುವರಿಯುವ ಜೊತೆಗೆ ನಮ್ಮ ಧರ್ಮ ನಂಬಿಕೆ ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.