ಮೈಸೂರು: ಚಾಮುಂಡಿಬೆಟ್ಟದಲ್ಲಿ ಅಪರಾಧ ಕೃತ್ಯ ತಡೆಗೆ ಟಾಸ್ಕ್ ಫೋರ್ಸ್ ರಚಿಸಬೇಕು ಅಲ್ಲದೆ ಬೆಟ್ಟವನ್ನು ಮದ್ಯ, ಸಿಗರೇಟ್, ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯನ್ನು ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆಸಿದರು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಚಾಮುಂಡಿ ಬೆಟ್ಟ ಪ್ರಾಧಿಕಾರ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಮಾಡಿದೆ. ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ.
ಮಹದೇಶ್ವರ ಬೆಟ್ಟ ಪ್ರಾಧಿಕಾರ, ಸವದತ್ತಿ ಎಲ್ಲಮ್ಮ ಪ್ರಾಧಿಕಾರ, ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ಸೇರಿದಂತೆ ಇತರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇಗುಲ ಸೇರಿದಂತೆ ಸುಮಾರು 23 ದೇಗುಲಗಳ ಅಭಿವೃದ್ಧಿ ಆಗಬೇಕು. ಪ್ರಸನ್ನಕೃಷ್ಣಸ್ವಾಮಿ ದೇಗುಲ, ಕೋಟೆ ಆಂಜನೇಯಸ್ವಾಮಿ ದೇಗುಲ, ಭುವನೇಶ್ವರಿ ಅಮ್ಮನವರ ದೇಗುಲ, ಶ್ವೇತವರಾಹ ಸ್ವಾಮಿ ದೇಗುಲ, ಗಾಯತ್ರಿ ಅಮ್ಮನವರ ದೇಗುಲ ಸೇರಿದಂತೆ ಒಟ್ಟು ಐದು ದೇಗುಲಗಳ ಜೀರ್ಣೋದ್ಧಾರ ಮಾಡಲಾಗುತ್ತದೆ. ಬರುವ ಭಕ್ತಾಧಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಇಡೀ ಚಾಮುಂಡಿ ಬೆಟ್ಟದ ಅಭಿವೃದ್ಧಿ ಆಗಬೇಕಿದೆ ಅದಕ್ಕಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ.
ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಇದರ ಜೊತೆಗೆ ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರು ಪೂರೈಕೆ ಯೋಜನೆ, ಕಸ ವಿಲೇವಾರಿ, ನಿರ್ಮಲ ಶೌಚಾಲಯದ ವ್ಯವಸ್ಥೆ ಆಗಬೇಕು. ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಬೇಕು.
ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಚಾಮುಂಡೇಶ್ವರಿ ಪ್ರಾಧಿಕಾರದ ಮುಖಾಂತರ ಭರಿಸಲಾಗುತ್ತದೆ. ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಫೋಟೋಗ್ರಫಿಗೆ ಸಂಪೂರ್ಣ ನಿಷೇಧ ಹೇರಲಾಗುವುದು.
ವಿದ್ಯುತ್ ದೀಪಗಳ ಅವಳವಡಿಸುವ ಮೂಲಕ ಚಾಮುಂಡಿ ಬೆಟ್ಟವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗುವುದು.
ದಾಸೋಹ ಭವನದ ಸುಧಾರಣೆ ಮಾಡಿ, ರುಚಿಕರ ಊಟ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ 169 ಕೋಟಿ ಫಿಕ್ಸೆಡ್ ಡೆಪಾಸಿಟ್ ಇದ್ದು, ಇದರಲ್ಲಿ ನಿಶ್ಚಿತ ಠೇವಣಿಯೇ 162 ಕೋಟಿಯಿದೆ. ಪ್ರತಿವರ್ಷವೂ ಖರ್ಚು ಕಳೆದು ಹೆಚ್ಚಿನ ಆದಾಯ ಉಳಿಯುತ್ತಿದೆ. 2023-24 ರಲ್ಲಿ 49.64 ಕೋಟಿ ಆದಾಯ ಬಂದಿದೆ 21 ಕೋಟಿ ಖರ್ಚು ಕಳೆದು 28.18 ಕೋಟಿ ಆದಾಯ ಬಂದಿದೆ. ಹಾಗೂ ಚಾಮುಂಡೇಶ್ವರಿ ದೇಗುಲದ ಆದಾಯ ಪ್ರತಿ ವರ್ಷವೂ ಹೆಚ್ಚುತ್ತಿದೆ.
ದೇವಿಕೆರೆ ಸ್ವಚ್ಚತೆ, ನಂದಿ ಮಾರ್ಗದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಮುಂದಿನ ಐದು ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ರೋಪ್ ವೇ ನಿರ್ಮಾಣ ಹಳೆಯ ಯೋಜನೆ.
ಆದರೆ ಪರಿಸರ ವಾದಿಗಳ ವಿರೋಧದಿಂದಾಗಿ ಅದು ಹಾಗೆಯೇ ನಿಂತು ಹೋಯಿತು ಈ ಬಗ್ಗೆ ಇಂದು ಚರ್ಚೆಯಾಗಿಲ್ಲ ಎಂದು ಹೇಳಿದರು. ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ ಹಾಗೂ ಬೆಟ್ಟದ ಮೇಲಿನ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗುವುದು. ಒತ್ತುವರಿಯಾಗಿರುವ ದೇಗುಲದ ಆಸ್ತಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಹೇಳಿದ್ದಾರೆ.