ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷವಾಗಿ ಸಹಸ್ರಾರು ಭಕ್ತರು ಆಗಮಿಸಿ ಮಲೆ ಮಾದಪ್ಪನ ದರ್ಶನ ಪಡೆದು ಹರಕೆ ಪೂಜಾ ಸೇವೆ ಪುನಸ್ಕಾರಗಳನ್ನು ಸಲ್ಲಿಸಿದರು.
ಅಮಾವಾಸ್ಯೆ ದಿನದ ಹಿನ್ನೆಲೆ ಮಲೆ ಮಾದಪ್ಪನ ಸನ್ನಿಧಿಗೆ ಹರಿದು ಬಂದ ಸಹಸ್ರಾರು ಭಕ್ತರು ಮಳೆಯ ನಡುವೆ ಭಕ್ತರು ಹರಕೆ ಪೂಜೆಗಳನ್ನು ಸಲ್ಲಿಸಿದ್ದಾರೆ. ಹರಕೆ ಹೊತ್ತ ಭಕ್ತಾದಿಗಳು ಹರಳೆಣ್ಣೆ ಬತ್ತಿಯನ್ನು ಹಚ್ಚಿಕೊಂಡು ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ನಮಸ್ಕರಿಸುತ್ತಾ ಪಂಜಿನ ಸೇವೆ ಸಲ್ಲಿಸಿದ್ದಾರೆ.
ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನಕ್ಕೆ ಮಹದೇಶ್ವರ ಬೆಳ್ಳಿ ವಾಹನಕ್ಕೆ ಪೂಜೆ ಸಲ್ಲಿಸಿ ದೇವಾಲಯ ಸುತ್ತ ಎಳೆದು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಧೂಪ ಕರ್ಪೂರ ದೀಪ ಹಚ್ಚಿ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದು ಮಲೆ ಮಾದಪ್ಪನ ಕೃಪೆಗೆ ಪಾತ್ರರಾದರು. ಸಂಜೆ ಚಿನ್ನದ ತೇರನ್ನು ಎಳೆದು ಪೂಜೆ ಸಲ್ಲಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರಾವಣ ಮಾಸ ಮುಕ್ತಾಯ ಪ್ರಯುಕ್ತ 108 ಕುಂಭ ಕಳಸದೊಂದಿಗೆ ಶ್ರೀ ಮಲೆ ಮಾದೇಶ್ವರ ಬೆಟ್ಟದಲ್ಲಿರುವ ಮಜ್ಜನ ಬಾವಿಯಿಂದ ಬೇಡಗಂಪನ ಸಮುದಾಯದ ಸರದಿ ಅರ್ಚಕರು ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.ಅಮಾವಾಸ್ಯೆ ಪೂಜೆ ಸಲ್ಲಿಸಲು ತಮಿಳುನಾಡು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಆಗಮಿಸಿದ್ದರು.
ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಇರುವುದರಿಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಪ್ರಾಧಿಕಾರದ ವತಿಯಿಂದ ದಾಸೋಹ ಕುಡಿಯುವ ನೀರು ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಪ್ರಾಧಿಕಾರದ ಸಿಬ್ಬಂದಿ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಜೊತೆ ಸೌಜನ್ಯದಿಂದ ವರ್ತಿಸಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದ್ದಾರೆ.